ಭಾರತೀಯ ಸಮಾಜವನ್ನು ಕೋಮುದ್ರುವೀಕರಣಗೊಳಿಸುವ ಕಿಡಿಗೇಡಿಗಳಿಗೆ ಸರಕಾರವೇ ಪರೋಕ್ಷವಾಗಿ ಕುಮ್ಮಕ್ಕು ನೀಡಿದಂತೆ ಇತ್ತೀಚೆಗಿನ ಅನಪೇಕ್ಷಿತ ಬೆಳವಣಿಗೆಗಳಿಂದ ಭಾಸವಾಗುತ್ತಿವೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಪತ್ರಿಕಾಪ್ರಕಟನೆಯಲ್ಲಿ ಹೇಳಿದ್ದಾರೆ.
ನಿರುದ್ಯೋಗ, ಬಡತನ, ಅಸಮಾನತೆ ನಿರ್ಮೂಲನ, ಮೂಲಭೂತ ಸೌಕರ್ಯಗಳ ಒದಗಿಸುವಿಕೆ, ಬೆಲೆಯೇರಿಕೆ-ಹಣದುಬ್ಬರ ನಿಯಂತ್ರಣ ಮೊದಲಾದ ಅತ್ಯಗತ್ಯ ವಿಷಯಗಳತ್ತ ಗಮನ ಕೊಡಬೇಕಾದ ಸರಕಾರವು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಈ ಬಗ್ಗೆ ರಚನಾತ್ಮಕ ಹೋರಾಟ ರೂಪಿಸುವಲ್ಲಿ ಪ್ರತಿಪಕ್ಷಗಳು ಕೂಡ ಸಫಲವಾಗುತ್ತಿಲ್ಲ. ಈ ಬೆಳವಣಿಗೆಯು ಪ್ರಜಾಪ್ರಭುತ್ವ ಭಾರತಕ್ಕೆ ಹೇಳಿಸಿದ್ದಲ್ಲ.
ಭಾವನಾತ್ಮಕ ವಿಚಾರಗಳಲ್ಲೇ ತಮ್ಮ ರಾಜಕೀಯ ನೆಲೆ ಗಟ್ಟಿಗೊಳಿಸುವ ನೀಚ ರಾಜಕಾರಣವನ್ನು ಕೂಡಲೇ ಕೊನೆಗೊಳಿಸಬೇಕು.
ಪ್ರವಾದಿನಿಂದನೆಯಂತಹ ಇಸ್ಲಾಮ್ ವಿರೋಧಿ ಬೆಳವಣಿಗೆಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವವರು ಪ್ರತಿಭಟನೆಯ ದಿಕ್ಕನ್ನು ಬದಲಿಸಲು ಹುನ್ನಾರ ನಡೆಸುವವರ ಬಗ್ಗೆ ಎಚ್ಚರದಿಲ್ಲಿರಬೇಕಾಗಿದೆ.
ದೀರ್ಘದೃಷ್ಟಿಯುಳ್ಳ ಉಲಮಾಗಳು ಮತ್ತು ಕಾನೂನು ತಜ್ಞರನ್ನೊಳಗೊಂಡು ಮಾತ್ರ ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ದೃಶ್ಯ ಮಾಧ್ಯಮಗಳಲ್ಲಿ ನಡೆಯುವ ಕೋಮುದ್ರುವೀಕರಣ ಸೃಷ್ಟಿಸುವ ಯಾವುದೇ ಅನಗತ್ಯ ಚರ್ಚೆಗಳಲ್ಲಿ ಯಾವುದೇ ಸಮುದಾಯದ ನಾಯಕರು ಭಾಗವಹಿಸದೆ, ಸಾಧ್ಯವಿದ್ದಷ್ಟೂ ಶಾಂತಿಯ ವಾತಾವರಣದ ಸೃಷ್ಟಿಗೆ ಒತ್ತುಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.