ಮಂಗಳೂರು,ಅ.15: ಕುಂದಾಪುರದ ಮಹಿಳೆಯೊಬ್ಬರ ಹೆರಿಗೆಯ ಸಂದರ್ಭ ಹೆಣ್ಣು ಮಗು ಎಂದು ಹೇಳಿ 18 ದಿನಗಳ ಬಳಿಕ ಮಗುವನ್ನು ಬೇರೆ ಆಸ್ಪತ್ರೆಗೆ ದಾಖಲಿಸಿದಾಗ ಪೋಷಕರಿಗೆ ಆ ಮಗು ಗಂಡು ಮಗು ಎಂಬುದಾಗಿ ತಿಳಿದು ಬಂದ ಪ್ರಕರಣಕ್ಕೆ ಸಂಬಂಧಿಸಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಮಗುವಿನ ಜನನದ ಲಿಖಿತ ರೂಪದ ಎಂಟ್ರಿ ವೇಳೆ ಕರ್ತವ್ಯದಲ್ಲಿದ್ದವರಿಂದ ತಪ್ಪಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಮಗುವಿನ ಜನನದ ಸಂದರ್ಭ ಕೇಸ್ ಶೀಟ್ನಲ್ಲಿ ಮಗುವಿನ ಲಿಂಗವನ್ನು ದಾಖಲಿಸುವಾಗ ಮಾಡಲಾದ ತಪ್ಪಿನಿಂದ ಪೋಷಕರೂ ಗೊಂದಲದ ಜತೆಗೆ ಒತ್ತಡಕ್ಕೆ ಕಾರಣವಾಗಿದೆ.
ಪ್ರಕರಣದ ಬಗ್ಗೆ ಸಮಗ್ರ ತನಿಖೆಯನ್ನು ಮಾಡಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು. ಮಾತ್ರವಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದ್ದು, ಅವರಿಗೂ ಪ್ರಕರಣದ ವರದಿಯನ್ನು ಶೀಘ್ರವೇ ಒಪ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ
ಮಗು ನಿನ್ನೆಯವರೆಗೂ ಲೇಡಿಗೋಶನ್ ಆಸ್ಪತ್ರೆಯ ಎನ್ಐಸಿಯುನಲ್ಲೇ ದಾಖಲಾಗಿತ್ತು. ಅಲ್ಲಿ ಸಾಕಷ್ಟು ನವಜಾತ ಶಿಶುಗಳು ಇರುವುದರಿಂದ ಮಗುವಿನ ಕುಟುಂಬದವರಿಗೆ, ಪೋಷಕರಿಗೆ ಅಲ್ಲಿಗೆ ಭೇಟಿ ನೀಡಲು ಅವಕಾಶವನ್ನೂ ನೀಡಲಾಗುವುದಿಲ್ಲ. ಆದರೆ ನಿನ್ನೆ ಮನೆಯವರು ತಾವು ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ತಾಯಿ ಮಗುವನ್ನು ಉಡುಪಿಗೆ ಕರೆದೊಯ್ದಿದ್ದರು. ಮತ್ತೆ ರಾತ್ರಿ ಹಿಂದೆ ಬಂದಿದ್ದರು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮಗುವನ್ನು ಇನ್ನೂ ಕೆಲ ದಿನಗಳ ತೀವ್ರ ನಿಗಾ ಅಗತ್ಯವಿದೆ. ಮತ್ತೆ ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಇದು ಯಾವುದೇ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಆದ ಘಟನೆಯಲ್ಲ.
ಮಗುವಿನ ಅಥವಾ ತಾಯಿಯ ಚಿಕಿತ್ಸೆಯ ಕೇಸ್ ಶೀಟ್ನಲ್ಲಿ ಆರಂಭದಿಂದಲೂ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ ತಾಯಿಯ ಮಗುವನ್ನು ಬದಲಿಸಲಾಗಿದೆ ಎಂಬ ಆರೋಪ ಸರಿಯಲ್ಲ. ಅಂತಹ ಸಾಧ್ಯತೆಯೂ ಇಲ್ಲ. ಆ ಕುರಿತಾದ ಕಾನೂನನ್ನು ನಾವೆಲ್ಲಾ ಅರ್ಥ ಮಾಡಿಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಅಂತಹ ಅಮಾನವೀಯ ಕೃತ್ಯ ಈ ಆಸ್ಪತ್ರೆಯಲ್ಲಿ ನಡೆದಿಲ್ಲ,ನಡೆಯಲು ಬಿಡುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.
ಪ್ರಕರಣ ದಾಖಲು
ಕುಂದಾಪುರ ಕೋಡಿಯ ಮಹಿಳೆಯೋರ್ವರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ 27 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ವರದಿಯಲ್ಲೂ ಮಗು ಹೆಣ್ಣು ಎಂದು ನಮೂದಿಸಲಾಗಿದೆ. ಮಗುವಿನ ದೈಹಿಕ ತೂಕ ಕಡಿಮೆ ಇದೆ ಎಂಬ ಕಾರಣಕ್ಕೆ ಕಳೆದ 18 ದಿನಗಳಿಂದ ಮಗುವನ್ನು NICU ವಿನಲ್ಲಿ ಇರಿಸಲಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.
ಈ ಸಂಬಂಧ ಮಗುವಿನ ತಂದೆ ಮುಸ್ತಫಾ ಅವರು ಲೇಡಿಗೋಶನ್ ಆಸ್ಪತ್ರೆ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ಮಗು ಅಪಹರಣ ಪ್ರಕರಣ ದಾಖಲಿಸಲಿಸಿದ್ದಾರೆ. ಸೆಕ್ಷನ್ 363 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಸೋಮವಾರದಂದು ಪೋಷಕರ ಮತ್ತು ಮಗುವಿನ ರಕ್ತದ ಮಾದರಿಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಸಂಗ್ರಹಿಸಲಾಗುವುದು. ಆ ಬಳಿಕ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ.