ನವದೆಹಲಿ, ಏ.15: ಕೋವಿಡ್ ತಡೆಗಟ್ಟುವ ಸಲುವಾಗಿ ಇಂದಿನಿಂದ ಕೇಂದ್ರ ಸರ್ಕಾರ ಎರಡನೇ ಹಂತದ ಲಾಕ್ಡೌನ್ ಘೋಷಿಸಿದ್ದು, ಈ ಲಾಕ್ಡೌನ್ ಹೇಗಿರಲಿದೆ? ಜನ ಏನು ಮಾಡಬೇಕು? ಏನು ಮಾಡಬಾರದು? ಯಾವುದು ಲಭ್ಯ? ಯಾವುದು ಅಲಭ್ಯ? ಎಂಬ ಕುರಿತ ಸಂಪೂರ್ಣ ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಈ ಮಾರ್ಗಸೂಚಿಯಲ್ಲಿ ಎರಡನೇ ಹಂತದ ಲಾಕ್ಡೌನ್ ಅವಧಿಯಲ್ಲಿ ಕೃಷಿ, ಕೈಗಾರಿಕೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಸಡಿಲಿಸಲಾಗಿದ್ದು, ಕೆಲಸಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಲಾಕ್ಡೌನ್ ಅವಧಿಯಲ್ಲಿ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ.
ಏನೆಲ್ಲಾ ಇರುವುದಿಲ್ಲ?
- ಲಾಕ್ಡೌನ್ ನಿಂದಾಗಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಮಾನಗಳು, ಎಲ್ಲಾ ರೀತಿಯ ರೈಲು ಸೇವೆಗಳು ಮತ್ತು ಬಸ್ ಸಂಚಾರ ಸೇವೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು ಮೇ 03ರ ವರೆಗೆ ಇದು ಮುಂದುವರೆಯುತ್ತದೆ.
- ಎಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸ್ಥಗಿತ.
- ಧಾರ್ಮಿಕ ಕ್ಷೇತ್ರಗಳ ಸ್ಥಗಿತ ಮುಂದುವರೆಯಲಿದೆ.#ಹಾಟ್ಸ್ಪಾಟ್ ಎಂದು ಗುರುತಿಸಲಾಗಿರುವ ಪ್ರದೇಶಗಳಿಗೆ ಹೊರಗಿನಿಂದ ಯಾರ ಪ್ರವೇಶಕ್ಕೂ ಅನುಮತಿ ಇಲ್ಲ. ಈ ಪ್ರದೇಶದಲ್ಲಿ ಕಾನೂನು ಕಠಿಣವಾಗಿರಲಿದ್ದು, ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ.
- ಎಲ್ಲಾ ರೀತಿಯ ಸಾರ್ವಜನಿಕ ಸಮಾರಭಗಳಿಗೂ ತಡೆ.
- ಚಿತ್ರ ಮಂದಿರಗಳು, ಮಾಲ್ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಈಜುಕೊಳ ಸೇರಿದಂತೆ ಎಲ್ಲಾ ಕ್ರೀಡಾ ಮತ್ತು ಮನರಂಜನಾ ಕ್ಷೇತ್ರಗಳು ತೆರೆಯಲಾಗುವುದಿಲ್ಲ.
- ಈ ಅವಧಿಯಲ್ಲಿ ಎಲ್ಲೇ ಯಾರೇ ಮೃತರಾದರೂ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.
- ಟ್ಯಾಕ್ಸಿ ಸೇರಿದಂತೆ ಯಾವುದೇ ಖಾಸಗಿ ವಾಹನ ಸಾರಿಗೆಗೆ ಅವಕಾಶ ಇಲ್ಲ.
ಏನೆಲ್ಲಾ ಇರಲಿದೆ?
- ಎಲ್ಲ ರೀತಿಯ ಸರುಕುಗಳ ಸಾಗಣೆಗೆ ಅವಕಾಶ (ಅತ್ಯಗತ್ಯ ವಸ್ತುಗಳು ಹೊರತಾಗಿಯೂ)
- ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್ಗಳು, ಆಯುಷ್ ಕೇಂದ್ರಗಳು ಸೇರಿದಂತೆ ಎಲ್ಲ ಆರೋಗ್ಯ ಸೇವೆಗಳ ಕಾರ್ಯಾಚರಣೆ
- ಎಲ್ಲ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳ ಸಂಪೂರ್ಣ ಕಾರ್ಯಾಚರಣೆ. ಕೃಷಿ ಕಾರ್ಯಗಳು, ಉತ್ಪಾದನೆಗಳ ಮಾರಾಟ, ವಿತರಣೆ, ಗೊಬ್ಬರ, ಬೀಜಗಳ ಮಾರಾ; ಮೀನುಗಾರಿಕೆ; ಪಶುಸಂಗೋಪನೆ; ಟೀ, ಕಾಫಿ ಹಾಗೂ ರಬ್ಬರ್ ತೋಟಗಾರಿಕೆಗಳಿಗೆ ಅವಕಾಶ
- ಆರ್ಬಿಐ, ಎನ್ಪಿಸಿಐ, ಸಿಸಿಐಎಲ್ ಸೇರಿದಂತೆ ಹಣಕಾಸು ಸಂಸ್ಥೆಗಳು, ಪಾವತಿ ವ್ಯವಸ್ಥೆ ಆಪರೇಟರ್ಗಳು ಕಾರ್ಯಾಚರಿಸಬಹುದು
- ಫೇಸ್ ಮಾಸ್ಕ್ ಧರಿಸಿ ಹಾಗೂ ಅಂತರ ಕಾಯ್ದುಕೊಳ್ಳುವ ಮೂಲಕ ನರೇಗಾ ಅಡಿಯಲ್ಲಿ ಕೆಲಸಗಳಿಗೆ ಅವಕಾಶ
- ಗ್ರಾಮೀಣ ಭಾಗಗಳಲ್ಲಿರುವ ಕೈಗಾರಿಕೆಗಳ ಕಾರ್ಯಾಚರಣೆ; ಆಹಾರ ಸಂಸ್ಕರಣ ಕೇಂದ್ರಗಳು, ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು, ಗ್ರಾಮೀಣ ಭಾಗಗಳಲ್ಲಿ ಕಟ್ಟಡ ಮತ್ತು ಕೈಗಾರಿಕೆ ಯೋಜನೆಗಳು, ನೀರಾವರಿ ಮತ್ತು ಜಲ ಸಂರಕ್ಷಣ ಯೋಜನೆಗಳಿಗೆ ಆದ್ಯತೆ. ಗ್ರಾಮೀಣ ಭಾಗಗಳಲ್ಲಿ ಇವುಗಳಿಂದಾಗಿ ಉದ್ಯೋಗ ಅವಕಾಶ ತೆರೆದುಕೊಳ್ಳುತ್ತವೆ.
- ಕಲ್ಲಿದ್ದಲು, ತೈಲ ಹಾಗೂ ಖನಿಜ ತಯಾರಿಕೆ ಚಟುವಟಿಕೆಗಳಿಗೆ ಅವಕಾಶ. ಐಟಿ ಹಾರ್ಡ್ವೇರ್ ಹಾಗೂ ಅಗತ್ಯ ವಸ್ತುಗಳ ತಯಾರಿಕೆ, ಪ್ಯಾಕೇಜಿಂಗ್ಗೆ ಅವಕಾಶ
- ಡಿಜಿಟಲ್ ಆರ್ಥಿಕತೆ ಸೇವಾ ವಲಯಗಳಲ್ಲಿ ಅತ್ಯಗತ್ಯವಾಗಿದೆ; ಇದು ದೇಶದ ಉನ್ನತಿಗೂ ಮುಖ್ಯವಾಗಿದೆ. ಇ–ಕಾಮರ್ಸ್ ಕಾರ್ಯಾಚರಣೆಗಳು, ಐಟಿ ಮತ್ತು ಐಟಿ ಆಧಾರಿತ ಸೇವೆಗಳು, ಆನ್ಲೈನ್ ತರಬೇತಿ, ದೂರಶಿಕ್ಷಣ ಕಾರ್ಯಗಳು ಮುಂದುವರಿಸಬಹುದು
- ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ಅಡಚಣೆ ಎದುರಾಗದಂತೆ ಪೂರೈಕೆಯಾಗಲು ಕ್ರಮ. ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳ ಅಗತ್ಯ ಕಚೇರಿಗಳು ತೆರೆಯುವುದು ಹಾಗೂ ಸೀಮಿತ ಸಿಬ್ಬಂದಿ ಕಾರ್ಯಾಚರಣೆ
- ಮುದ್ರಣ, ಎಲೆಕ್ಟ್ರಾನಿಕ್ ಮೀಡಿಯಾ, ಡಿಟಿಎಚ್ ಹಾಗೂ ಕೇಬಲ್ ಸೇವೆಗಳ ಮುಂದುವರಿಕೆ. ಐಟಿ ಮತ್ತು ಐಟಿ–ಆಧಾರಿತ ಸೇವೆಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ. ಇ–ಕಾಮರ್ಸ್ ಕಂಪನಿಗಳು ಹಾಗೂ ಅವುಗಳ ವಾಹನಗಳ ಸಂಚಾರಕ್ಕೆ ಅವಕಾಶ
- ಲಾಕ್ಡೌನ್ನಿಂದ ಸಿಲುಕಿರುವ ಪ್ರವಾಸಿಗರು ಹಾಗೂ ವ್ಯಕ್ತಿಗಳು ಉಳಿದುಕೊಂಡಿರುವ ಹೊಟೇಲ್ಗಳು, ಹೋಂಸ್ಟೇಗಳು ಹಾಗೂ ಲಾಡ್ಗಳ ಕಾರ್ಯಾಚರಣೆ.
ಈ ಮೇಲಿನ ಎಲ್ಲವೂ ಮುಂದಿನ 19 ದಿನಗಳ ಅವಧಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು? ಏನು ಮಾಡುವಂತಿಲ್ಲ? ಮತ್ತು ಏನೆಲ್ಲಾ ಲಭ್ಯ-ಅಲಭ್ಯ? ಎಂಬ ಕುರಿತು ಮಾಹಿತಿಯಾಗಿದೆ. ಒಂದು ವೇಳೆ ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ಮೀರಿ ನಡೆದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.