janadhvani

Kannada Online News Paper

CAA ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೌಲ್ಯಗಳನ್ನು ಹೊಂದಿಲ್ಲ. ಸಂವಿಧಾನವು ಮತ ಸೌಹಾರ್ದತೆಗೆ ಪ್ರಾಧಾನ್ಯ ನೀಡುತ್ತಿದ್ದು, ಈ ಕಾಯ್ದೆಯು ಜನರ ನಡುವೆ ಭಿನ್ನತೆಯನ್ನುಂಟುಮಾಡುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಮೂಲ ಸತ್ವವನ್ನು ಹೊಂದಿಲ್ಲ. ಅಷ್ಟೇ ಅಲ್ಲದೆ ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳಿರುವುದಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.

ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿ ಮೀಸಲಾತಿಗೆ ಸಂಬಂಧಪಟ್ಟ ಗೊತ್ತುವಳಿಯನ್ನು ವಿಧಾನಸಭಾ ಸದಸ್ಯರು ಒಮ್ಮತದಿಂದ ಅಂಗೀಕರಿಸಿದ್ದಾರೆ. ಅದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಶಾಸಕ ಒ. ರಾಜಗೋಪಾಲ್ ವಿರೋಧ ಸೂಚಿಸಿದ್ದಾರೆ. ಈ ಅವಿಶ್ವಾಸ ನಿರ್ಣಯ ಸಂವಿಧಾನ ವಿರೋಧಿ ಎಂದಿದ್ದಾರೆ ರಾಜಗೋಪಾಲ್.

ಎರಡು ಗಂಟೆಗಳ ಕಾಲ ಚರ್ಚೆ ನಡೆಸಿ, ಅವಿಶ್ವಾಸ ನಿರ್ಣಯಕ್ಕೆ ವಿಧಾನಸಭೆ ಅಂಗೀಕಾರ ನೀಡಿದ ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು ವಿಪಕ್ಷ ಒತ್ತಾಯಿಸಿತ್ತು. ಆಡಳಿತರೂಢ ಪಕ್ಷ ಮತ್ತು ವಿಪಕ್ಷ ಸಮಾನ ನಿಲುವು ಹೊಂದಿರುವುದರಿಂದ ಅವಿಶ್ವಾಸ ನಿರ್ಣಯಕ್ಕೆ ವಿಧಾನಸಭೆಯ ಅಂಗೀಕಾರ ಲಭಿಸಲಿದೆ. ನಿರ್ಣಯಕ್ಕೆ ಅಂಗೀಕಾರ ಲಭಿಸಿದರೆ ತಾವು ರಾಷ್ಟ್ರಪತಿಯ ಮೊರೆ ಹೋಗುವುದಾಗಿ ಬಿಜೆಪಿ ಹೇಳಿದೆ.