ನವದೆಹಲಿ,ಅ.01: ಸಹಕಾರಿ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ಗಳ ಗ್ರಾಹಕರ ಖಾತೆಗಳ ಮೇಲೆ ಆರ್ಬಿಐ ನಿರ್ಬಂಧ ಹೇರಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗಾಗಲೇ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ಗಳಲ್ಲಿ ಗ್ರಾಹಕರ ಖಾತೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಹಾಗೆಯೇ ಇಡೀ ದೇಶದ ಎಲ್ಲೆಡೆಯೂ ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ಹೇರಲಿದ್ದಾರೆ ಎಂದು ಹೇಳಲಾಗಿತ್ತು ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು,ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣ ಸುರಕ್ಷಿತವಾಗಿದೆ ಎಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಬ್ಯಾಂಕಿಗ್ ವ್ಯವಸ್ಥೆ ಸ್ಥಿರವಾಗಿದೆ. ಹಾಗಾಗಿ ಗ್ರಾಹಕರು ಆಂತಕಕ್ಕೀಡಾಗುವ ಅಗತ್ಯವಿಲ್ಲ ಎಂದು ಆರ್ಬಿಐ ಟ್ವೀಟ್ ಮೂಲಕ ತಿಳಿಸಿದೆ.
ಇತ್ತೀಚೆಗೆ ಆರ್ಬಿಐ ಸಂಸ್ಥೆಯೂ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಆದ್ದರಿಂದ ಗ್ರಾಹಕರು ಆರು ತಿಂಗಳುಗಳ ಕಾಲ 10 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ.
ಇನ್ನು ಈ ಎಲ್ಲಾ ನಿರ್ಬಂಧಗಳ ನಡುವೆಯೂ ಸಹಕಾರಿ ಬ್ಯಾಂಕ್, ಆರ್ಬಿಐ ಮುಂದಿನ ಆದೇಶದವರೆಗೆ ತನ್ನ ದೈನಂದಿನ ವ್ಯವಹಾರ ಮುಂದುವರೆಸಬೇಕು ಎನ್ನಲಾಗಿತ್ತು. ಪಿಎಂಸಿ ದೇಶದ ಆರು ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದ್ದು, ಯಾವುದೇ ಶಾಖೆಯಲ್ಲೂ ಸಾಲ ಮಂಜೂರು ಅಥವಾ ಸಾಲ ನವೀಕರಣಕ್ಕೆ ಅವಕಾಶ ಇಲ್ಲದಂತಾಗಿತ್ತು.
ಮುಂಬೈ ಮೂಲದ ಈ ಸಹಕಾರಿ ಬ್ಯಾಂಕ್ ಹಣವನ್ನು ಎರವಲು ಪಡೆಯುವುದು ಮತ್ತು ಹೊಸ ಠೇವಣಿಗಳನ್ನು ಸ್ವೀಕರಿಸುವುದು ಸೇರಿದಂತೆ ಯಾವುದೇ ಹೊಣೆಗಾರಿಕೆಯನ್ನು ಹೊಂದುವಂತಿಲ್ಲ. ಸಹಕಾರಿ ಬ್ಯಾಂಕ್ ತನ್ನ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ವರ್ಗಾಯಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ. ಆರ್ಬಿಐ ನಿರ್ದೇಶನದ ಪ್ರತಿಯನ್ನು ಪ್ರತಿ ಖಾತೆದಾರನಿಗೂ ಕುಳುಹಿಸಬೇಕು ಮತ್ತು ಅದನ್ನು ಬ್ಯಾಂಕ್ ಮತ್ತು ಬ್ಯಾಂಕ್ ವೆಬ್ ಸೈಟ್ ನಲ್ಲೂ ಪ್ರದರ್ಶಿಸಬೇಕು ಎಂದು ಆದೇಶಿಸಲಾಗಿತ್ತು.