ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಲಹೆ ಪಡೆದು ಫೋನ್ ಟ್ಯಾಪಿಂಗ್ ವಿಚಾರವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೃತಜ್ಞತೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ರೀತಿಯ ತನಿಖೆಗೆ ಮುಕ್ತವಾಗಿದ್ದೇನೆ ವಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿಯನ್ನು ಹತ್ತಿಕ್ಕಲು ಇದೊಂದು ಅಸ್ತ್ರ ಎಂದು ಕೆಲವು ಮಾಧ್ಯಮಗಳು ಹೇಳುತ್ತಿವೆ ಎಂದು ಖಾಸಗಿ ವಾಹಿನಿಗಳನ್ನು ಮಾಜಿ ಸಿಎಂ ತರಾಟೆಗೆ ತೆಗೆದುಕೊಂಡರು.
ಯಾವ ಅಸ್ತ್ರವು ಇಲ್ಲ, ಎಲ್ಲಾ ಅಸ್ತ್ತ ನಿಶ್ಯಸ್ತ್ರ ಆಗುತ್ತದೆ. ಎಷ್ಟೇ ಪ್ರಯತ್ನ ಮಾಡಿದರು ನಿಮಗೆ ಯಾವುದೇ ಫಲ ಸಿಗಲ್ಲ, ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದವನು. ಕಳೆದ 14 ತಿಂಗಳ ಆಡಳಿತದಲ್ಲಿ ನಾನು ತಪ್ಪು ಮಾಡಿಲ್ಲ, ನಾನ್ಯಾಕೆ ಭಯ ಪಡಬೇಕು ನಾನೇನು ಚೆಕ್ ಮುಖಾಂತರ ಹಣ ಪಡೆದಿಲ್ಲ, ರಾಜ್ಯ ಲೂಟಿ ಮಾಡಿಲ್ಲ ಎಂದು ಕುಮಾರಸ್ವಾಮಿ ನುಡಿದರು.
ಆಪರೇಷನ್ ಕಮಲದ ಹೆಸರಲ್ಲಿ ಆದ ಸೂಟ್ ಕೇಸ್ ವ್ಯಾಪಾರದ ತನಿಖೆನೂ ಆಗಲಿ ಈ ಬಗ್ಗೆ ಕೂಡ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ. ಆ ಕೆಲಸನು ಪರಿಗಣಿಸಿ ಸಿಬಿಐಗೆ ಒಳಪಡಿಸಲಿ, ಇನ್ನೂ ಹಿಂದಿನ ಹದಿನೈದು ವರ್ಷಗಳ ಎಲ್ಲಾ ಸರ್ಕಾರದ ಅವಧಿಯಲ್ಲಿ ಏನಾಗಿದೆ ತನಿಖೆ ಆಗಲಿ ಎಂದು ಕುಮಾರಸ್ವಾಮಿ ಆಗ್ರಹ ಮಾಡಿದರು.
ನಂತರ ಮಾತನಾಡಿದ ಅವರು, ನನ್ನ ಹೋರಾಟ ತನಿಖೆಯಿಂದ ನಿಲ್ಲಿಸಲು ಸಾಧ್ಯವಿಲ್ಲ, ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಎಂದು ಆರೋಪಿಸಿದ್ದಾರೆ. ಯಲಹಂಕ ತಹಸೀಲ್ದಾರ್ ಪೋಸ್ಟ್ ಗೆ ಎಷ್ಟು ವ್ಯವಹಾರ ಆಯ್ತು? ಹೇಳಿ ನಮಗೆ ವರ್ಗಾವಣೆ ಲೂಟಿ ಅಂತೀರ ಎಂದು ಪ್ರಶ್ನೆ ಮಾಡಿದರು. ಇನ್ನೂ ವರ್ಗಾವಣೆ ದಂಧೆಗೆ ಯಡಿಯೂರಪ್ಪ ಸುಪುತ್ರನನ್ನೇ ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಇದೇ ವೇಳೆ ಆರೋಪ ಮಾಡಿದರು.