ನವದೆಹಲಿ(ಜೂನ್.12): ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆ ಜಾರಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 17ನೇ ಲೋಕಸಭೆಯ ಮೊದಲ ಮುಂಗಾರು ಅಧಿವೇಶನ ಜೂನ್ 17 ರಿಂದ ಆರಂಭವಾಗಲಿದೆ. ಈ ವೇಳೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧದ ಕುರಿತಾದ ಹೊಸ ಮಸೂದೆಯನ್ನು ಮಂಡಿಸಲಿದೆ.
ಕೇಂದ್ರ ಸರ್ಕಾರ ಈ ಹಿಂದೆಯೇ ತ್ರಿವಳಿ ತಲಾಖ್ ನಿಷೇಧದ ಹೊಸ ಮಸೂದೆ ಜಾರಿಗೆ ತರಬೇಕಿತ್ತು. ಈ ಮುನ್ನವೇ 16ನೇ ಲೋಕಸಭೆ ಅವಧಿ ಮುಕ್ತಾಯ ಮತ್ತು ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಗದ ಕಾರಣ ಅದು ಮಂಡನೆಯಾಗಿರಲಿಲ್ಲ.
16ನೇ ಲೋಕಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಆದರೆ, ಮಸೂದೆಯನ್ನು ಸೆಲೆಕ್ಟ್ ಕಮಿಟಿಯ ಪರಿಶೀಲನೆಗೆ ಕೊಡಬೇಕೆಂದು ವಿಪಕ್ಷಗಳು ಆಗ್ರಹ ಪಡಿಸಿದ್ದವು. ಬಳಿಕ ರಾಜ್ಯಸಭೆಯಲ್ಲಿ ಕೂಡ ವಿಪಕ್ಷಗಳ ಗದ್ದಲದ ನುಡವೇ ಇತ್ಯರ್ಥವಾಗದೇ ಹೋದರು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ತ್ರಿವಳಿ ತಲಾಖ್ ಎಂಬುವುದು ಇಸ್ಲಾಮಿನಲ್ಲಿ ಪ್ರೋತ್ಸಾಹನೀಯ ಕಾರ್ಯವಲ್ಲ ಆದರೂ ಅತೀ ಅವಶ್ಯಕ ಸಂದರ್ಭಗಳಲ್ಲಿ ದಾಂಪತ್ಯ ಜೀವನ ಮುನ್ನಡೆಸಲು ಸಾಧ್ಯವಿಲ್ಲವೆಂಬ ಘಟ್ಟದಲ್ಲಿ ಪತಿ ಪತ್ನಿಯರು ಪರಸ್ಪರ ಬಂಧವನ್ನು ಬೇರ್ಪಡಿಸಲು ಇಸ್ಲಾಮ್ ನೀಡಿದ ಒಂದು ಸಿಂಧುವಾದ ಕಾರ್ಯವಾಗಿದೆ.
ಆದರೆ ಅದನ್ನು ಕೆಲವು ಅಜ್ಞಾನಿಗಳು ಬೇಕಾಬಿಟ್ಟಿಯಾಗಿ ಉಪಯೋಗಿಸುತ್ತಿದ್ದು, ಧರ್ಮಕ್ಕೆ ಮಾರಕವಾಗಿ ಪರಿಣಮಿಸಿದೆ.
ತ್ರಿವಳಿ ತಲಾಖ್ ನಿಷೇಧ ಕಾನೂನನ್ನು ಜಾರಿ ಮಾಡುವುದು ಮುಸ್ಲಿಮರ ಧಾರ್ಮಿಕ ಹಕ್ಕನ್ನು ನಿಷೇಧಿಸಿದಂತೆ. ಅದನ್ನು ದುರುಪಯೋಗ ಪಡಿಸುವುದನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಸರ್ಕಾರ ಮುಂದಾಗಬೇಕಿದೆ.