ಪುಣೆ, ಏ.5- ಜೀವನದಲ್ಲಿ ಅನುಭವವೇ ಉತ್ತಮ ಪಾಠ. ಅದಕ್ಕೆ ನಾನೇ ಉದಾಹರಣೆ. ಅನುಭವದಿಂದ ನಾನು ಸದೃಢನಾಗಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಸದಾ ಕ್ರಿಯಾಶೀಲನಾಗಿರಬೇಕೆಂಬುದು ನನ್ನ ಆಕಾಂಕ್ಷೆ. ನನಗೆ ಕೆಲಸದೊಂದಿಗೆ ಈಗಾಗಲೇ ಮದುವೆಯಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಭಾರತದಲ್ಲಿ ಪ್ರತಿದಿನ 27 ಸಾವಿರ ಉದ್ಯೋಗ ನಷ್ಟವಾಗುತ್ತಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಉದ್ಯೋಗಸೃಷ್ಟಿ, ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹೇಳಿದರು.
ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ತರಾತುರಿಯಲ್ಲಿ ತಯಾರಿಸಿದ್ದಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದಲೂ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಪರಿಣಿತರೊಂದಿಗೆ ಚರ್ಚಿಸಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಬಡತನ ನಿರ್ಮೂಲನೆ, ಆರೋಗ್ಯ ಸಂರಕ್ಷಣೆ, ಮಹಿಳಾ ಮೀಸಲಾತಿ, ರೈತರ ಹಿತರಕ್ಷಣೆ ಇತ್ಯಾದಿ ನಮ್ಮ ಕಾಂಗ್ರೆಸ್ನ ಧ್ಯೇಯವಾಗಿದೆ. ನಾನು ಸದಾ ಬಡವರು, ದುರ್ಬಲರ ಪರ ನಿಲ್ಲುವ ವ್ಯಕ್ತಿ ಎಂದು ರಾಹುಲ್ ಹೇಳಿದರು.