janadhvani

Kannada Online News Paper

ಜನಸಾಗರವನ್ನು ಸಾಕ್ಷಿಯಾಗಿಸಿ ‘ಕರ್ನಾಟಕ ಮುಸ್ಲಿಮ್ ಜಮಾಅತ್’ಅಸ್ತಿತ್ವಕ್ಕೆ

ಬೆಂಗಳೂರು:ಬಹು ನಿರೀಕ್ಷಿತ ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಗೆ ಅಖಿಲ ಭಾರತ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್‌ ಮುಸ್ಲಿಯಾರ್ ಅವರು ನಗರದಲ್ಲಿ ಭಾನುವಾರ ನಡೆದ ಬೃಹತ್ ಸಮಾವೇಶದಲ್ಲಿ ಚಾಲನೆ ನೀಡಿದರು.‘ಇದು ಯಾವುದೇ ರಾಜಕೀಯ ಪಕ್ಷದ ಅಂಗಸಂಸ್ಥೆಯಲ್ಲ. ಹಿಂದುಳಿದಿರುವ ನಮ್ಮ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸಂಘಟನೆ ಶ್ರಮಿಸಲಿದೆ. ಈ ಸಂಘಟನೆಯನ್ನು ಸರ್ಕಾರ ಕಡೆಗಣಿಸಬಾರದು’ ಎಂದು ಎ.ಪಿ.ಅಬೂಬಕ್ಕರ್‌ ಮುಸ್ಲಿಯಾರ್ ಹೇಳಿದರು.

‘ಕೇರಳ ಮುಸ್ಲಿಂ ಜಮಾಅತ್‌ ಆರಂಭಿಸಿದಾಗ ಹಲವಾರು ಟೀಕೆಗಳು ಕೇಳಿಬಂದವು. ಆ ಸಂಘಟನೆಯ ಸಮಾಜಸೇವೆಯನ್ನು ಕಂಡ ಬಳಿಕ ಎಲ್ಲರೂ ಸುಮ್ಮನಾದರು. ಎಲ್ಲ ರಂಗಗಳಲ್ಲಿ ಮುಸ್ಲಿಮರನ್ನು ಹಿಂದಕ್ಕೆ ತಳ್ಳಲಾಗುತ್ತಿದೆ. ಸಂವಿಧಾನದ ಪ್ರಕಾರ ಎಲ್ಲ ಸಮುದಾಯಗಳಿಗೂ ಹಕ್ಕು, ಸೌಲಭ್ಯಗಳು ಸಿಗಲೇಬೇಕು’ ಎಂದು ಸುಲ್ತಾನುಲ್ ಉಲಮಾ ಒತ್ತಾಯಿಸಿದರು.‘ಹಕ್ಕುಗಳನ್ನು ಪಡೆಯಲು ನಾವು ಒಗ್ಗಟ್ಟಾಗಲೇಬೇಕು. ಇಲ್ಲದಿದ್ದರೆ, ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನಷ್ಟ ಉಂಟಾಗಲಿದೆ’ ಎಂದು ಎಚ್ಚರಿಸಿದರು.ಕಿಚೌಚ ಶರೀಫ್‌ ಸೂಫಿಕ್ಷೇತ್ರದ ಧಾರ್ಮಿಕ ಗುರು ಸೈಯದ್‌ ನೂರಾನಿ ಮಿಯಾ ಅಶ್ರಫಿ, ‘ನಮ್ಮ ಧ್ವನಿಗಳನ್ನು ಅಡಗಿಸಲಾಗುತ್ತಿದೆ. ರಾಜ್ಯದಲ್ಲಿನ 90 ಲಕ್ಷ ಮುಸ್ಲಿಮರು ಹಕ್ಕುಗಳಿಗಾಗಿ ಒಗ್ಗಟ್ಟಾಗಬೇಕು. ನಮ್ಮ ಆಶೋತ್ತರಗಳನ್ನು ಈಡೇರಿಸುವ ಹೊಣೆಗಾರಿಕೆ ಸಮುದಾಯದ ಜನಪ್ರತಿನಿಧಿಗಳ ಮೇಲಿದೆ. ನಮ್ಮವರ ಧ್ವನಿಗಳನ್ನು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಹೆಚ್ಚು ಮೊಳಗಿಸಬೇಕು’ ಎಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ಕರೆ ನೀಡಿದರು.

ಸಮಾವೇಶದ ಸಂಚಾಲಕ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಮಾತನಾಡಿ, ರಾಜ್ಯದಲ್ಲಿ 90 ಲಕ್ಷ ಮುಸ್ಲಿಮರಿದ್ದಾರೆ. ಆದರೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಶೇ.4ರಷ್ಟು ಮಾತ್ರ ಮೀಸಲಾತಿ ಇದೆ. ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕೇವಲ ಶೇ.12ರಷ್ಟು ಮಾತ್ರವಿದೆ. ಇತರ ಹಿಂದುಳಿದವರ ಉನ್ನತ ಶಿಕ್ಷಣದ ಪ್ರಮಾಣ ಶೇ. 22ರಷ್ಟಿದೆ ಎಂದರು.

ಸಾಚಾರ್ ವರದಿ ಮಂಡನೆಯಾಗಿ ಹಲವು ವರ್ಷಗಳಾದರೂ ಈವರೆಗೆ ಅದರ ಅನುಷ್ಠಾನದ ಪ್ರಾಮಾಣಿಕ ಪ್ರಯತ್ನ ವಾಗಿಲ್ಲ. ನಮ್ಮ ಜನಸಂಖ್ಯೆಯ ಅನುಗುಣವಾಗಿ ವಿಧಾನಸಭೆಯಲ್ಲಿ ನಮ್ಮ ಸಮುದಾಯದ 40 ಶಾಸಕರಿರಬೇಕಿತ್ತು. ಆದರೆ ಈಗ ಇರುವುದು ಕೇವಲ 7 ಮಂದಿ ಮಾತ್ರ. ಶೇ.3ರಷ್ಟು ಜನಸಂಖ್ಯೆ ಇರುವ ಒಂದು ಸಮುದಾಯದ ಇಬ್ಬರು ಮುಖ್ಯಮಂತ್ರಿಗಳಾಗಿದ್ದರು. ಆದರೆ ನಮ್ಮ ಸಮುದಾಯದ ನಾಯಕತ್ವವನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ರಾಜಕೀಯ ಉದ್ದೇಶಕ್ಕಾಗಿ ಈ ಸಂಘಟನೆ ಅಸ್ತಿತ್ವಕ್ಕೆ ತರುತ್ತಿಲ್ಲ. ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗಾಗಿ ಶ್ರಮಿಸುವವರಿಗೆ ನಮ್ಮ ಬೆಂಬಲ ಇರುತ್ತದೆ ಎಂದು ಅವರು ಹೇಳಿದರು.

ಸಂಘಟನೆಯ ಸಂಚಾಲಕ ಎಸ್‌.ಎಸ್‌.ಎ. ಖಾದರ್,‘ಕೆಎಂಜೆ ಸಮುದಾಯದ ಸಂಘಟನೆಯಾಗಿದೆ. ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಲು ಈ ಸಂಘಟನೆ ಶ್ರಮಿಸಲಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಸಮುದಾಯದ ಸದಸ್ಯರನ್ನು ಆಯ್ಕೆ ಮಾಡಲು ಪ್ರಯತ್ನಿಸಲಿದೆ. ಸಂವಿಧಾನದ ಪರಿಧಿಯೊಳಗೆ ಸಂಘಟನೆಯ ಚಟುವಟಿಕೆಗಳು ಇರಲಿವೆ’ ಎಂದರು.‘ಇಂತಹ ಅಭ್ಯರ್ಥಿಗೇ ಮತದಾನ ಮಾಡಿ ಎಂದು ನಾವು ಹೇಳುವುದಿಲ್ಲ. ರಾಜಕೀಯ ರಂಗವನ್ನು ನಾವು ಪ್ರವೇಶ ಮಾಡುವುದಿಲ್ಲ. ಬದಲಿಗೆ, ಸರ್ಕಾರಿ ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸುವ ಕೆಲಸ ಮಾಡುತ್ತೇವೆ’ ಎಂದರು. ಮೌಲಾನ ನಜೀಬ್ ಹೈದರ್ ಮಿಯಾ ಬರಕಾತಿ, ಹಝ್ರತ್ ಅಲ್ಲಾಮಾ ಮುಹಮ್ಮದ್ ಮನ್ನಾನ್ ಮಿಯಾ ರಝಾ ಖಾನ್ ಖಾದ್ರಿ, ಮೌಲಾನ ಸೈಯದ್ ನೂರಾನಿ ಮಿಯಾ ಅಶ್ರಫಿ, ಬದ್ರುಸ್ ಸಾದತ್ ಸೈಯದ್ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ, ಸಜ್ಜಾದ್ ನಶೀನ್ ಸೈಯದ್ ಫಝಲ್ ಕೊಯಾಮ್ಮ ಅಲ್ ಬುಖಾರಿ, ಸರ್ ಖಾಝಿ ತಾಜುಲ್ ಫುಖಹಾ ಮೌಲಾನ ಇಬ್ರಾಹೀಂ ಮುಸ್ಲಿಯಾರ್, ಡಾ .ಅಬ್ದುಲ್ ಹಕೀಮ್ ಅಝ್ಹರಿ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಸ್.ಎಸ್.ಎಸ್.ಖಾದರ್, ಸಚಿವರಾದ ಯು.ಟಿ.ಖಾದರ್, ರಹೀಮ್ ಖಾನ್, ಶಾಸಕ ಆರ್. ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಇಬ್ರಾಹೀಂ, ನಸೀರ್ ಅಹ್ಮದ್, ಬಿ.ಎಂ.ಫಾರೂಕ್, ವಿಧಾನರಿಷತ್ ಮಾಜಿ ಸದಸ್ಯ ಸಲೀಮ್ ಅಹ್ಮದ್, ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸೀರ್ ಹುಸೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್ ಸಾರಥಿಗಳು

ಸಾರಥಿಗಳು:ಕರ್ನಾಟಕ ಮುಸ್ಲಿಮ್ ಜಮಾಅತ್‌ನ ಸಲಹಾ ಮಂಡಳಿಯ ಮುಖ್ಯಸ್ಥ ಸುಲ್ತಾನುಲ್ ಉಲೇಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್, ಗೌರವ ಅಧ್ಯಕ್ಷ- ಸೈಯದ್ ಫಝಲ್ ಕೊಯಮ್ಮ ಅಲ್ ಬುಖಾರಿ (ಉಳ್ಳಾಲ), ಅಧ್ಯಕ್ಷ- ಮೌಲಾನ ಶಂಶುಲ್ ಹಕ್ ಖಾದ್ರಿ, ಪ್ರಧಾನ ಕಾರ್ಯದರ್ಶಿ- ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ಹಣಕಾಸು ಕಾರ್ಯದರ್ಶಿ- ಡಾ. ಎಸ್.ಎಸ್.ಎ.ಖಾದರ್ ಅವರನ್ನು ಆಯ್ಕೆ ಮಾಡಲಾಗಿದೆ.

error: Content is protected !! Not allowed copy content from janadhvani.com