janadhvani

Kannada Online News Paper

ಬೆಂಗಳೂರು-ಮಂಗಳೂರು ವೋಲ್ವೊ ಮತ್ತು ರಾಜಹಂಸ ಬಸ್‌ ಸೇವೆ ಸ್ಥಗಿತ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಮಂಗಳೂರಿನಿಂದ ಬೆಂಗಳೂರಿಗೆ ಎಲ್ಲ ರೀತಿಯ ವೋಲ್ವೊ ಮತ್ತು ರಾಜಹಂಸ ಬಸ್‌ ಸೇವೆ ಸ್ಥಗಿತಗೊಳಿಸಿದೆ. ಕರ್ನಾಟಕ ಸಾರಿಗೆ (ಕೆಂಪು ಬಸ್‌) ಸೇವೆ ಮಾತ್ರ ಲಭ್ಯವಿದೆ ಎಂದು ನಿಗಮದ ಮಂಗಳೂರು ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ವೋಲ್ವೊ ಬಸ್‌ಗಳಲ್ಲಿ ಮುಂಗಡ ಟಿಕೇಟು ಕಾಯ್ದಿರಿಸಿದವರಿಗೆ ಶೇಕಡ 100ರಷ್ಟು ಮರುಪಾವತಿ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ ಕುಮಾರ್ ಹೇಳಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ಚಾರ್ಮಾಡಿ ಮಾರ್ಗವಾಗಿ 23 ಕರ್ನಾಟಕ ಸಾರಿಗೆ ಬಸ್‌ಗಳು ಮಾತ್ರ ಸಂಚರಿಸಲಿವೆ. ಮೈಸೂರಿಗೆ ಮಂಗಳೂರಿನಿಂದ 43 ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಮೂರು ಬಸ್‌ಗಳು ಮಾತ್ರ ಬುಧವಾರ ತೆರಳಿವೆ. ಅವುಗಳೂ ಬಹುತೇಕ ಖಾಲಿ ಇದ್ದವು ಎಂದು ಮಾಹಿತಿ ನೀಡಿದ್ದಾರೆ.

ಸೋಮವಾರ ಮಂಗಳೂರಿನಿಂದ ಬೆಂಗಳೂರು ಮತ್ತು ಮೈಸೂರಿಗೆ ತೆರಳಿದ್ದ ರಾಜಹಂಸ, ವೋಲ್ವೊ ಮತ್ತು ಸ್ಲೀಪರ್‌ ಬಸ್‌ಗಳಲ್ಲಿ ಯಾವುದೂ ಹಿಂದಿರುಗಿ ಬಂದಿಲ್ಲ.