ಮಂಗಳೂರು, ಜು.29: ಮತಾಂಧ ಶಕ್ತಿಗಳಿಂದ ಹತ್ಯೆಗೀಡಾದವರಿಗೆ ಸರಕಾರ ಪರಿಹಾರ ನೀಡುವುದು ತೆರಿಗೆ ದುಡ್ಡಿನಿಂದ. ಮುಖ್ಯ ಮಂತ್ರಿ ತಮ್ಮ ಕಿಸೆಯಿಂದ ನೀಡುವುದಲ್ಲ. ಹಾಗಾಗಿ ಹತ್ಯೆಗೀಡಾದವರನ್ನು ಅವರವರ ಹೆತ್ತವರ ನೋವನ್ನು ಸಮಾನವಾಗಿ ಪರಿಗಣಿಸಿ, ಪಕ್ಷಪಾತವಿಲ್ಲದೆ ಪರಿಹಾರ ನೀಡಬೇಕು ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಳ್ಳಾರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಕುಟುಂಬನ್ನೂ ಭೇಟಿಯಾಗಬೇಕಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಈ ನಡುವೆ ಅವರು ಇಲ್ಲಿಂದ ವಿಮಾನ ಏರುವ ವೇಳೆಗೆ ಇಲ್ಲಿ ಮತ್ತೊಂದು ಕೊಲೆಯಾಗಿದೆ ಎಂದು ಹೇಳಿದರು.
ಮಸೂದ್, ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಸಮರ್ಥ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು ಹಾಗೂ ಈ ಹತ್ಯೆಗಳಿಗೆ ಯಾವ ಸಂಘಟನೆಗಳು ಕುಮ್ಮಕ್ಕು ನೀಡಿದೆಯೋ ಅವುಗಳನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಹಾಗೂ ಸರಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.







