ಸೌದಿ ಅರೇಬಿಯಾದ ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪಂಜಾಬಿನ ನಜಮ್ ಖಾನ್ ರವರು, ಕಳೆದ ಸೆಪ್ಟೆಂಬರ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಜ್ಞೆ ಕಳಕೊಂಡ ಅವರು ಸರಿಸುಮಾರು ಹತ್ತು ತಿಂಗಳುಗಳ ಕಾಲ ಕೋಮಾ ಸ್ಥಿತಿಯಲ್ಲೇ ಮುಂದುವರಿದಿದ್ದರು.
ಎರಡು ತಿಂಗಳ ಹಿಂದೆ ಈ ವಿಷಯ ಕೆಸಿಎಫ್ ಕಾರ್ಯಕರ್ತರ ಗಮನಕ್ಕೆ ಬಂದು, ವಿಚಾರಿಸಿದಾಗ ಖಾನ್ ರವರು ಊರಿಗೆ ಮರಳುವ ಅವಶ್ಯಕತೆ ಇದುವುದಾಗಿ ತಿಳಿಯಿತು.

ಆದರೆ ಹತ್ತು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಸರಿಸುಮಾರು ಒಂದು ಕೋಟಿ ರೂಪಾಯಿಯಷ್ಟು ಆಸ್ಪತ್ರೆಯ ಬಿಲ್ ಪಾವತಿಸಲು ಬಾಕಿ ಉಳಿದಿತ್ತು.
ಈ ಕುರಿತು ಕೆಸಿಎಫ್ ನೇತಾರರಾದ ಮುಹಮ್ಮದ್ ಮಲಬೆಟ್ಟು ಹಾಗೂ ಬಾಷಾ ಗಂಗಾವಳಿಯವರು ಆಸ್ಪತ್ರೆಯ ಅಧಿಕೃತರೊಂದಿಗೆ ಖಾನ್ ಅವರ ಪರಿಸ್ಥಿತಿಯನ್ನು ವಿವರಿಸಿದ ಹಿನ್ನೆಲೆಯಲ್ಲಿ ಖಾನ್ ಅವರಿಂದ ಹಣ ವಸೂಲು ಮಾಡದೆ, ಆಸ್ಪತ್ರೆಯ ವೆಚ್ಚವನ್ನು ಕಾನೂನಿನ ನೆರವಿನಿಂದ ಪಡೆಯುವುದಾಗಿ ತಿಳಿಸಿ ಖಾನ್ ರನ್ನು ಡಿಸ್ಚಾರ್ಜ್ ಮಾಡಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಗೊಂಡರೂ ಕೋವಿಡ್ ಕಾರಣದಿಂದಾಗಿ ಸೌದಿಯಿಂದ ದೆಹಲಿಗೆ ವಿಮಾನಯಾನ ಇಲ್ಲದ ತೊಂದರೆಯೂ ಎದುರಾಯಿತು. ಇದರ ಪರಿಹಾರಕ್ಕಾಗಿ ಕೆಸಿಎಫ್ ನೇತಾರರು ಸಂಗರೂರ್ ಸಂಸದರಾದ ಭಗ್ವಂತ್ ಮನ್ನ್ ಅವರನ್ನು ಹಾಗೂ ಸೌದಿಯಲ್ಲಿರುವ ಭಾರತದ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸಿದರು.
ರಾಯಭಾರಿ ಕಚೇರಿಯ ಅಬ್ದುಲ್ ಅಝೀಝ್ ಪವಿತ್ರ ಗ್ರೂಪ್ ಹಾಗೂ ಸಯ್ಯಿದ್ ರವರ ಸಹಕಾರದಿಂದ ದಮ್ಮಾಮಿನಿಂದ ದೆಹಲಿಗೆ ಹೋಗುವ ವಿಮಾನದಲ್ಲಿ ಖಾನ್ ಅವರನ್ನು ಕಳುಹಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ಪಂಜಾಬಿಗೆ ತಲುಪಿಸುವುದರಲ್ಲಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಯಶಸ್ವಿಯಾಗಿದೆ.






