janadhvani

Kannada Online News Paper

ಪ್ರಿಯಾಂಕಾ ಗಾಂಧಿ ಮೇಲೆ ಯುಪಿ ಪೋಲೀಸರಿಂದ ಹಲ್ಲೆ

ಲಖನೌ: ನಿವೃತ್ತ ಐಪಿಎಸ್ ಅಧಿಕಾರಿ ಎಸ್‌.ಆರ್.ದರಪುರಿ ಅವರ ನಿವಾಸಕ್ಕೆ ಭೇಟಿ ನೀಡುವ ವೇಳೆ ನನ್ನನ್ನು ತಡೆದ ಉತ್ತರ ಪ್ರದೇಶ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧಿತರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಎಸ್‌.ಆರ್.ದರಪುರಿ ಅವರ ನಿವಾಸಕ್ಕೆ ಭೇಟಿ ನೀಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಪ್ರಿಯಾಂಕಾ ವಾದ್ರಾ ಗಾಂಧಿ ಅವರನ್ನು ಮಾರ್ಗ ಮಧ್ಯೆ ಉತ್ತರ ಪ್ರದೇಶ ಪೊಲೀಸರು ತಡೆದಿದ್ದು, ಈ ವೇಳೆ ಪ್ರಿಯಾಂಕಾ ಗಾಂಧಿ ಮತ್ತು ಪೊಲೀಸರ ನಡುವೆ ವಾಕ್ಸರಮ ಏರ್ಪಟ್ಟಿತ್ತು. ಅದಾಗ್ಯೂ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಪ್ರಿಯಾಂಕಾ ನಿವೃತ್ತ ಐಪಿಎಸ್ ಅಧಿಕಾರಿ ಎಸ್‌.ಆರ್.ದರಪುರಿ ಅವರ ನಿವಾಸಕ್ಕೆ ತೆರಳುವಲ್ಲಿ ಯಶಸ್ವಿಯಾಗಿದ್ದರು.

ಈ ಘಟನೆ ಉತ್ತರ ಪ್ರದೇಶದಲ್ಲಿ ಕೆಲಕಾಲ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿತ್ತು. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಪ್ರಿಯಾಂಕಾ, ಉತ್ತರ ಪ್ರದೇಶ ಪೊಲೀಸರು ಹಲ್ಲೆ ಮಾಡಿದರು ಎಂದು ಗಂಭೀರ ಆರೋಪ ಮಾಡಿದರು.’ಪೊಲೀಸರು ನನ್ನನ್ನು ಸುತ್ತುವರಿದಿದ್ದರು. ಒಬ್ಬ ಮಹಿಳಾ ಪೇದೆ ನನ್ನ ಕತ್ತು ಹಿಡಿದುಕೊಂಡರೆ, ಮತ್ತೊಬ್ಬರು ತಳ್ಳಿದರು. ಅಧಿಕಾರಿ ಮನೆಗೆ ತೆರಳುತ್ತಿದ್ದ ನಮಗೆ ಅಡ್ಡಲಾಗಿ ಪೊಲೀಸ್‌ ವಾಹನವನ್ನು ನಿಲ್ಲಿಸಿ ಅಡ್ಡಗಟ್ಟಲಾಯಿತು. ನೀವು ಹೋಗುವಂತಿಲ್ಲ ಎಂದು ತಡೆದರು’ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.