janadhvani

Kannada Online News Paper

ದರ್ಪದ ವಾತಾವರಣ ಸೃಷ್ಟಿಗಾಗಿ ಉದ್ದೇಶಪೂರ್ವಕವಾಗಿ ಗೋಲಿಬಾರ್- ಸಿದ್ದರಾಮಯ್ಯ

ಬೆಂಗಳೂರು,ಡಿ.20: ಮಂಗಳೂರಿನಲ್ಲಿ ಉದ್ದೇಶಪೂರ್ವಕವಾಗಿಯೇ ಗೋಲಿಬಾರ್ ಮಾಡಲಾಗಿದೆ. ಭೀತಿ ಹಾಗೂ ದರ್ಪದ ವಾತಾವರಣ ಸೃಷ್ಟಿಗಾಗಿ ಇದನ್ನು ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ಮಾಡಲಾಗಿದೆ. ಇದು ಅಮಾನವೀಯ ಘಟನೆ ಎಂದು ಹೇಳಿದ್ದಾರೆ.

ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನಗಳು ನಡೆಸಲಾಗುತ್ತಿದೆ. ಪೊಲೀಸರು ಇಬ್ಬರು ಅಮಾಯಕರನ್ನು ಕೊಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಹತ್ಯೆಯ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಗೋಲಿಬಾರ್ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಮೋದಿ ಸರ್ಕಾರ ಗೃಹ ಸಚಿವರಾಗಿರುವ ಅಮಿತ್ ಶಾ ಅವರೇ ರಾಜ್ಯಸಭೆಯಲ್ಲಿ ಮಾತನಾಡುವಾಗ ಪೌರತ್ವ ಮಸೂದೆಯನ್ನು ವಿವಾದಾತ್ಮಕ ಕಾನೂನು ಎಂದು ಹೇಳಿದ್ದರು.

ಒಂದು ಕಡೆ ಯಡಿಯೂರಪ್ಪ ಅವರು ಗುಂಡು ಹಾರಿಸಬೇಡಿ ಎಂದು ಹೇಳಿದ್ದೇನೆಂದು ಹೇಳುತ್ತಾರೆ. ಆದರೆ, ಅವರ ಆದೇಶ ಇದ್ದರೂ ಪೊಲೀಸರು ಗುಂಡು ಹಾರಿಸಿದ್ದಾರೆಂದರೆ ಏನು ಅರ್ಥ? ಯಡಿಯೂರಪ್ಪ ಸಿಎಂ ಆಗಿ ಅವರ ಆದೇಶಕ್ಕೆ ಪೊಲೀಸರು ಬೆಲೆ ಕೊಡುತ್ತಿಲ್ಲ. ನನ್ನ ಪ್ರಕಾರ ಸರ್ಕಾರದ ಗಮನಕ್ಕೆ ತರದೆಯೇ ಪೊಲೀಸರು ಗೋಲಿಬಾರ್ ಮಾಡಲು ಸಾಧ್ಯವಿಲ್ಲ. ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳುವುದು ಇದರ ಉದ್ದೇಶ ಎಂದು ಆರೋಪಿಸಿದ್ದಾರೆ.