janadhvani

Kannada Online News Paper

ತೀರ್ಪು ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ- ಸುನ್ನಿ ವಕ್ಫ್‌ ಬೋರ್ಡ್‌

ಲಖನೌ: ಅಯೋಧ್ಯೆ ಭೂ ವಿವಾದ ಕುರಿತಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸದೇ ಇರಲು ಸುನ್ನಿ ಕೇಂದ್ರೀಯ ವಕ್ಫ್‌ ಬೋರ್ಡ್‌ ನಿರ್ಧರಿಸಿದೆ.

ತೀರ್ಪಿನ ಸಂಬಂಧ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಚರ್ಚಿಸಲು ಮಂಗಳವಾರ ಸುನ್ನಿ ವಕ್ಫ್‌ಬೋರ್ಡ್‌ನ ಸಭೆ ಉತ್ತರಪ್ರದೇಶದ ಲಖನೌದಲ್ಲಿ ನಡೆಯಿತು. ಈ ಸಭೆಯಲ್ಲಿ ಮಂಡಳಿಯ 8 ಮಂದಿಯ ಪೈಕಿ 7 ಮಂದಿ ಹಾಜರಾಗಿದ್ದರು.

ಸಭೆಯ ನಂತರ ಮಾತನಾಡಿದ ವಕ್ಫ್‌ ಬೋರ್ಡ್‌ನ ರಜಾಕ್‌ ಖಾನ್‌, ‘ಅಯೋಧ್ಯೆ ತೀರ್ಪಿಗೆ ಸಂಬಂಧಿಸಿದಂತೆ ಮರುಪರಿಶೀಲನಾ ಅರ್ಜಿ ಸಲ್ಲಿಸಬಾರದು ಎಂಬುದು ಇಂದಿನ ಸಭೆಯ ಬಹುತೇಕರ ತೀರ್ಮಾನವಾಗಿದೆ,’ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ ಆರು ಮಂದಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಇದೇ ವೇಳೆ, ವಕ್ಫ್‌ ಬೋರ್ಡ್‌ಗೆ ನೀಡಲಾಗುವ ಐದು ಎಕರೆ ಜಮೀನನ್ನು ಪಡೆಯಬೇಕೋ ಬೇಡವೋ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದೂ ರಜಾಕ್‌ ಖಾನ್‌ ತಿಳಿಸಿದ್ದಾರೆ.

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ನ.9ರಂದು ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ವಿವಾದಿತ 2.77 ಎಕರೆ ಭೂಮಿಯನ್ನು ರಾಮ ಲಲ್ಲಾಗೆ ವಹಿಸಿತ್ತು. ಸುನ್ನಿ ವಕ್ಫ್‌ ಬೋರ್ಡ್‌ಗೆ ಅಯೋಧ್ಯೆಯಲ್ಲೇ ಪ್ರತ್ಯೇಕ ಐದು ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ತಿಳಿಸಿತ್ತು.