janadhvani

Kannada Online News Paper

ರಿಲಯನ್ಸ್‌ಗೆ 30 ಸಾವಿರ ಕೋಟಿ ನಷ್ಟ- ಅನಿಲ್ ಅಂಬಾನಿ ರಾಜೀನಾಮೆ

ನವದೆಹಲಿ: ತೀವ್ರ ದಿವಾಳಿತನಕ್ಕೆ ಗುರಿಯಾಗಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್ ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ಅನಿಲ್ ಧೀರೂಬಾಯಿ ಅಂಬಾನಿ ಅವರು ರಾಜೀನಾಮೆ ನೀಡಿದ್ದಾರೆ.

ಅನಿಲ್​ ಅಂಬಾನಿ ಜೊತೆಗೆ, ಛಾಯಾ ವಿರಾನಿ, ರ್‍ಯಾನಾ ಕರಾನಿ, ಮಂಜರಿ ಕಾಕೆರ್ ಮತ್ತು ಸುರೇಶ್ ರಂಗಾಚಾರ್ ಅವರು ಸಹ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ರಿಲಯನ್ಸ್‌ ಕಮ್ಯುನಿಕೇಷನ್ಸ್ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಬಾನಿ, ಛಾಯಾ ವಿರಾನಿ, ಮಂಜರಿ ಕೇಕರ್ ಅವರು ನವೆಂಬರ್ 15ರಂದು, ರ್‍ಯಾನಾ ಕರಾನಿ ಅವರು ನವೆಂಬರ್ 14ರಂದು ಮತ್ತು ಸುರೇಶ್ ರಂಗಾಚಾರ್ ಅವರು ನವೆಂಬರ್ 13ರಂದು ರಾಜೀನಾಮೆ ನೀಡಿದ್ದಾರೆ. ಕಳೆದ ಅಕ್ಟೋಬರ್ 4ರಂದು ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈಗಾಗಲೇ ಮುಖ್ಯ ಹಣಕಾಸು ಅಧಿಕಾರಿ ಮಣಿಕಂಠನ್​ ಸ್ಥಾನಕ್ಕೆ ಡಿ. ವಿಶ್ವನಾಥ್​ ಎಂಬುವರು ಆಯ್ಕೆಯಾಗಿದ್ದಾರೆ. ಇನ್ನೂ ಸಾಲಗಾರರ ಸಮಿತಿ ಅನುಮೋದನೆ ದೊರೆಯಬೇಕಿದೆ ಎಂದು ತಿಳಿದು ಬಂದಿದೆ.

2019-20ರ ಜುಲೈ-ಸೆಪ್ಟೆಂಬರ್(ಎರಡನೇ ತ್ರೈಮಾಸಿಕ ಅವಧಿ)​ ಅವಧಿಯಲ್ಲಿ ರಿಲಯನ್ಸ್​ ಕಮ್ಯುನಿಕೇಷನ್ಸ್​ ಕಂಪನಿ 30,142 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಂಪನಿ 366 ಕೋಟಿ ರೂ. ನಷ್ಟ ಅನುಭವಿಸಿತ್ತು.