janadhvani

Kannada Online News Paper

75 ವರ್ಷದ ಯಡಿಯೂರಪ್ಪ ಮುಖ್ಯಮಂತ್ರಿ- ಬಿಜೆಪಿಗೆ ಮುಜುಗರ

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವಲ್ಲಿ ಪಕ್ಷದ ಹೈಕಮಾಂಡ್ ಮಣಿದಿದೆ, ಆದರೆ 75 ವರ್ಷದ ಯಡಿಯೂರಪ್ಪ ಅವರನ್ನು ಸಿಎಂ ಮಾಡಿರುವ ಬಿಜೆಪಿಗೆ ಮುಜುಗರ ಉಂಟು ಮಾಡಿದೆ.

75 ವರ್ಷ ಮೇಲ್ಪಟ್ಟವರು ಚುನಾವಣೆಗೆ ಸ್ಪರ್ಧಿಸದಂತೆ ತನ್ನ ಪಕ್ಷದ ಹಿರಿಯ ನಾಯಕರಿಗೆ ಸೂಚನೆ ನೀಡಿತ್ತು. ಆದರೆ ಒಬ್ಬರಿಗೊಂದು ಮತ್ತೊಬ್ಬರಿಗೊಂದು ರೀತಿಯಲ್ಲಿ ಪಕ್ಷಪಾತ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
75 ವರ್ಷ ಮೇಲ್ಪಟ್ಟವರು ಚುನಾವಣೆಗೆ ಸ್ಪರ್ಧಿಸದಂತೆ ಸೂಚನೆ ನೀಡಿದ್ದೀರಿ ಆದರೆ ಯಡಿಯೂರಪ್ಪ ನವರಿಗೆ ಹೇಗೆ ಸಿಎಂ ಮಾಡಿದಿರಿ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪ್ರಶ್ನೆ ಕೇಳಲಾಯಿತು, ಈ ವೇಳೆ ಉತ್ತರಿಸಲು ತಡಬಡಿಸಿದ ಜೆಪಿ ನಡ್ಡಾ ಸುಧಾರಿಸಿಕೊಂಡು ಪ್ರಶ್ನೆಗೆ ಉತ್ತರಿಸಿದರು.

ಯಡಿಯೂರಪ್ಪ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದವರು, ಹೀಗಾಗಿ ಸರ್ಕಾರ ರಚಿಸಲು ಅವರಿಗೆ ಅವಕಾಶ ನೀಡಲಾಗಿದೆ, ಹೀಗಾಗಿ ಬಿಜೆಪಿಯಿಂದ ಯಡಿಯೂರಪ್ಪನವರಿಗೆ ವಿನಾಯಿತಿ ನೀಡಲಾಗಿದೆ.

ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ ನಂತರ ಬಿಜೆಪಿ ತನ್ನ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿದೆ.,ವಯಸ್ಸಿನ ಮಿತಿಯನ್ನು ಬಿಜೆಪಿ ಎಲ್ಲಿಯೂ ಸಾಂವಿಧಾನಿಕವಾಗಿ ಲಿಖಿತ ರೂಪದಲ್ಲಿ ಜಾರಿಗೆ ತಂದಿರಲಿಲ್ಲ.

ವಯಸ್ಸಿನ ಮಿತಿ ಹೇರಿಕೆ ಮಾಡಿ, ಎಲ್,ಕೆ ಆಡ್ವಾಣಿ, ಮುರುಳಿ ಮನೋಹರ್ ಜೋಷಿ, ಸುಮಿತ್ರಾ ಮಹಾಜನ್, ಕೈರಾ ಮುಂಡಾ, ಶಾಂತಕುಮಾರ್, ಬಿ ಶಿ ಖಂಡೂರಿ, ಬಿಸಿ ಕೊಶೈರಿ ಮತ್ತು ಹುಕುಂ ದೇವ್ ನಾರಾಯಣ ಯಾದವ್ ಕಳೆದ ಲೋಕಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಿರಲಿಲ್ಲ,ಇದರ ಜೊತೆಗೆ 75 ವರ್ಷ ದಾಟಿರುವ ನಜ್ಮಾ ಹೆಪ್ತುಲ್ಲಾ ಮತ್ತು ಕಲ್ರಾಜ್ ಮಿಶ್ರಾ ಅವರನ್ನು ಕೂಡ ಕೇಂದ್ರ ಸಂಪುಟದಿಂದ ಕೈ ಬಿಡಲಾಯಿತು. ಕರ್ನಾಟಕದಲ್ಲಿ ಸ್ಥಿರ ಹಾಗೂ ಸಮರ್ಥ ಸರ್ಕಾರ ನೀಡುವುದಾಗಿ ಜೆಪಿ ನಡ್ಡ ಹೇಳಿದ್ದಾರೆ.