ನರಗುಂದ: ನರಹಂತಕರ ಕುಕೃತ್ಯಕ್ಕೆ ಬಲಿಯಾದ ಮರ್ಹೂಂ ಶಮೀರ್ ಶಹಾಪೂರ ರವರ ಮನೆಗೆ ಎಸ್ಸೆಸ್ಸೆಫ್ ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ ಹಾಗೂ ತಂಡ ಭೇಟಿ ನೀಡಿ ಸಾಂತ್ವನ ಹೇಳಿದರು.
ಧರ್ಮ ಜಾತಿ ಅಥವಾ ರಾಜಕೀಯದ ಹೆಸರಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಖಂಡನೀಯ. ಇದರಿಂದ ಯಾವ ಧರ್ಮಕ್ಕೂ ಲಾಭವೋ ನಷ್ಟವೋ ಇಲ್ಲ, ಬದಲಾಗಿ ಅಮಾಯಕ ಕುಟುಂಬಗಳು ಅನಾಥವಾಗುತ್ತಿವೆ ಎಂದು ಸ್ಪಷ್ಟಪಡಿಸಿದರು.ಅಮಾಯಕ ಯುವಕರನ್ನು ಗುಂಪುಸೇರಿ ಹತ್ಯೆ ಮಾಡುವುದು ಧೀರತೆಯಲ್ಲ, ಬದಲಾಗಿ ಅದು ಹೇಡಿತನ. ಇತರರ ಜೀವ ಉಳಿಸುವುದೇ ನಿಜವಾದ ಧೀರತೆ ಎಂದು ಅವರು ಹೇಳಿದರು.
ಜೀವಕ್ಕೆ ಬದಲಾಗಿ ಜೀವ ತೆಗೆಯುವುದು ಇಸ್ಲಾಮಿನ ಸಂಸ್ಕೃತಿಯಲ್ಲ. ಆದ್ದರಿಂದ ನಾವು ಯಾರೂ ಅಷ್ಟು ಕೀಳ್ಮಟ್ಟಕ್ಕೆ ಇಳಿಯಲ್ಲ. ಇಸ್ಲಾಮಿನ ಶರೀಅಃ ಚಾಲ್ತಿಯಲ್ಲಿರುವ ರಾಷ್ಟ್ರಗಳಲ್ಲೂ ಕೂಡ ನ್ಯಾಯಾಧೀಶರ ತೀರ್ಮಾನದಂತೆ ಮಾತ್ರವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸೌಹಾರ್ದಯುತವಾಗಿ ಬದುಕುತ್ತಿದ್ದ ನರಗುಂದದ ಜನರೆಡೆಯಲ್ಲಿ ಧರ್ಮಾಂದತೆಯ ವಿಷಬೀಜ ಬಿತ್ತಿ ಅಮಾಯಕ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿರುವ ಮುಖಂಡರು ಹಾಗೂ ಹಂತಕರಿಗೆ ತಕ್ಕ ಶಿಕ್ಷೆ ನೀಡಿ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹಾಫಿಝ್ ಸುಫ್ಯಾನ್ ಸಖಾಫಿ ಎಚ್ಚರಿಕೆ ನೀಡಿದರು.