janadhvani

Kannada Online News Paper

ಮಹಿಳೆಯ ಮತಾಂತರ ಗೊಂದಲ- ಜಮಾಯಿಸಿದ ಹಿಂದೂ ಪರ ಸಂಘಟನೆ

ಸಾಗರ: ಮನೆಯ ಸದಸ್ಯರು ಮತಾಂತರವಾಗುತ್ತಿದ್ದಾರೆ ಎಂದು ಆರೋಪಿಸಿ, ಸ್ಥಳೀಯರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ್ದು, ಇದರಿಂದ ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಗೋಪಾಲಗೌಡ ನಗರ ಬಡಾವಣೆಯಲ್ಲಿ ಮಹಿಳೆಯೊಬ್ಬರನ್ನು ಮತಾಂತರ ಮಾಡಲಾಗಿದೆ ಎಂಬ ಅನುಮಾನದ ಕಾರಣ ಅವರ ಮನೆಯ ಮುಂದೆ ಜನರ ಗುಂಪು ಜಮಾವಣೆಯಾಗಿತ್ತು.

ಮನೆಯವರು ಶಿಲುಬೆ ಧರಿಸಿ, ಮರಿಯಾ ಮಾತೆಯ ಪೂಜೆ ಮಾಡುತ್ತಿದ್ದಾರೆ. ಮೆಷಿನರಿಗಳು ಹಣದಾಸೆಗೆ ಹಿಂದೂಗಳ ಮತಾಂತರ ಮಾಡುತ್ತಿದ್ದಾವೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿಸಿದರು. ಗೋಪಾಲಗೌಡ ನಗರದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು.

ಮಹಿಳೆಯೊಬ್ಬರು ತನ್ನ ಗಂಡ ಕುಡಿಯುವುದನ್ನು ಬಿಟ್ಟರೆ ಮೇರಿ ಮಾತೆಯ ಪ್ರತಿಮೆ ತಂದು ಪೂಜಿಸುವುದಾಗಿ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಹೀಗಾಗಿ ಭಾನುವಾರ ಅವರು ಮೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದ್ದರು.

ಇದು ಮತಾಂತರವಾಗಿದೆ ಎಂಬ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಯಾವುದೇ ರೀತಿಯ ಮತಾಂತರ ನಡೆದಿಲ್ಲ ಎಂಬ ವಿಷಯ ಗೊತ್ತಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

error: Content is protected !! Not allowed copy content from janadhvani.com