janadhvani

Kannada Online News Paper

ದ.ಕ ಜಿಲ್ಲಾ ಎಸ್ಸೆಸ್ಸೆಫ್ ಕ್ಯಾಂಪಸ್: ಮಾದಕದ್ರವ್ಯ ಸೇವನೆಯ ವಿರುದ್ದ ಜಾಗೃತಿ ಅಭಿಯಾನ

ಬೆಳ್ತಂಗಡಿ: ಅಂತಾರಾಷ್ಟ್ರೀಯ ಮಾದಕದ್ರವ್ಯ ಸೇವನೆ, ಕಳ್ಳಸಾಗಣಿಕೆ ವಿರೋಧಿ ದಿನದ ಅಂಗವಾಗಿ ಎಸ್ಸೆಸ್ಸೆಫ್ ಕ್ಯಾಂಪಸ್ ದ.ಕ ಜಿಲ್ಲೆ (ಈಸ್ಟ್) ವತಿಯಿಂದ ಮಾದಕದ್ರವ್ಯ ಸೇವನೆಯ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ನಡೆಸಲಾಯಿತು.

ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ರಾಜ್ಯ ಪ್ರ. ಕಾರ್ಯದರ್ಶಿ ಡಾ. ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಮನುಕುಲದ ಮುಂದಿರುವ ಅತೀ ದೊಡ್ಡ ಸವಾಲಾಗಿರುವ ಅಮಲು ಪದಾರ್ಥಗಳ ಸೇವನೆಯಿಂದ ಈ ಸಮಾಜವನ್ನು ಮುಕ್ತಿಗೊಳಿಸಲು ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳು, ಯುವಜನ ಸಂಘಟನೆಗಳು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುವುದರ ಮೂಲಕ ಮಾತ್ರ ಸಾದ್ಯ ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ಸಲಹಾ ತಜ್ಞರಾದ ಡಾ. ವೆಂಕಟಕೃಷ್ಣ ಭಟ್ ಸುಳ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಾನಸಿಕ ಸ್ಥಿರತೆಯನ್ನು ಚಂಚಲಗೊಳಿಸುವ ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಜೀವನದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದರು . ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸವಿವರವಾಗಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯ್ಸ್ ಮಾತನಾಡಿ, ಅಮಲು ಪದಾರ್ಥಗಳ ಮಾರಾಟ ಜಾಲದಲ್ಲಿ ಯುವ ಜನತೆಯನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಯುವ ಜನತೆ ಎಚ್ಚೆತ್ತುಕೊಳ್ಳುವುದರೊಂದಿಗೆ ಸ್ವತಃ ಜಾಗೃತರಾಗಿ ಇತರರಿಗೆ ಜಾಗೃತಿ ಮೂಡಿಸಬೇಕೆಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು ಸ್ವಾಗತಿಸಿ, ಕನ್ವೀನರ್ ಅಶ್ಫಾಕ್ ಕೊಡುಂಗಾಯಿ ವಂದಿಸಿದರು.