ಸೌದಿ ಅರೇಬಿಯಾ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್ ಹಸ್ಸ ಸೆಕ್ಟರ್ ವತಿಯಿಂದ 74ನೇ ಸ್ವಾತಂತ್ರೋತ್ಸವದ ಅಂಗವಾಗಿ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಕಾರ್ಯಕರ್ತರಿಂದ ಅಲ್ ಹಸ್ಸ ಆಸ್ಪತ್ರೆಯಲ್ಲಿ ರಕ್ತದಾನ ಮಾಡಲಾಯಿತು.ರಕ್ತದ ಅನಿವಾರ್ಯತೆ ಮತ್ತು ಮಹತ್ವ ಅರಿತು ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಅಧ್ಯಕ್ಷ ಹಬೀಬ್ ಮುಸ್ಲಿಯಾರ್ ಮರ್ಧಾಳ ಸಲಹೆ ಮಾಡಿದರು.ಯುವಕರು ರಕ್ತದಾನದ ಮಹತ್ವ ಅರಿತು ಒಂದು ಜೀವ ಉಳಿಸುವ ಸದುದ್ದೇಶದಿಂದ ರಕ್ತದಾನ ಮಾಡಬೇಕು. ರಕ್ತವನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ.
ಆರೋಗ್ಯವಂತ ವ್ಯಕ್ತಿ ಮತ್ತೊಬ್ಬರಿಗೆ ರಕ್ತದಾನ ಮಾಡಿದರೆ ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಕೆಸಿಎಫ್ ಸೌದಿ ರಾಷ್ಟ್ರೀಯ ನಾಯಕ ಅಸ್ರು ಬಜ್ಪೆ ಅಭಿಪ್ರಾಯಿಸಿದರು.ರಕ್ತದ ಅವಶ್ಯಕತೆ ಇರುವ ಈ ವಿಷಮ ಪರಿಸ್ಥಿತಿಯಲ್ಲಿ ಕೆಸಿಎಫ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುವುದು ಶ್ಲಾಘನೀಯವಾಗಿದೆ.
ಕೆಸಿಎಫ್ ಕಾರ್ಯಕರ್ತರು ಪ್ರತಿ ವರ್ಷ ಹಜ್ಜಾಜಿಗಳ ಸೇವೆ ಮಾಡುವ ಮೂಲಕ ಹತ್ತು ಹಲವಾರು ಸಮಾಜಮುಖಿ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಅಲ್ ಹಸ್ಸ ಆಸ್ಪತ್ರೆಯ ಡಾ ಜನಾಬ್ ಅಶ್ರಫ್ ಬೆಂಗಳೂರು ಅವರು ಕೆಸಿಎಫ್ ಕಾರ್ಯಕರ್ತರನ್ನು ಪ್ರಶಂಸಿ ಮಾತನಾಡಿದರು. ಭಾರತದಲ್ಲಿ ಮತಾಂಧರ ಅಟ್ಟಹಾಸದಿಂದ ಸಮಾನ ಮನಸ್ಕ ಭಾರತೀಯರು ಅತಂತ್ರದಲ್ಲಿದ್ದಾರೆ.
ಭಾರತದ
ಭಾವೈಕ್ಯತೆ,ಏಕತೆಗಾಗಿ ಸರ್ವ ಭಾರತೀಯರು
ಕೋಮು ದ್ವೇಷ ಬಿಟ್ಟು ಒಂದಾಗಬೇಕು.
ಇಲ್ಲದಿದ್ದಲ್ಲಿ ಭಾರತಕ್ಕೆ ದೊಡ್ಡ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರೀಸ್ ಕಾಜೂರು ಹೇಳಿದರು.ರಕ್ತದಾನಿ ಕೆಸಿಎಫ್ ಕಾರ್ಯಕರ್ತರಿಗೆ ಅಲ್ ಹಸ್ಸ ಆಸ್ಪತ್ರೆ ವತಿಯಿಂದ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.ವರದಿ:ಇಸ್ಹಾಕ್ ಸಿ.ಐ.ಫಜೀರ್.