ಮಂಗಳೂರು: ಕೋವಿಡ್- 19 ಸಾಂಕ್ರಾಮಿಕ ವ್ಯಾಧಿಯ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ದ.ಕ.ಜಿಲ್ಲೆಯ ಅನಿವಾಸಿಗರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸಿಧ್ದವಾಗಿರುವ ಜಿಲ್ಲೆಯ ಸುನ್ನೀ ಶಿಕ್ಷಣ ಸಂಸ್ಥೆಗಳ ಪೈಕಿ ಮಂಜನಾಡಿ ಅಲ್ ಮದೀನಾ ಮತ್ತು ಮಾಣಿ ದಾರುಲ್ ಇರ್ಶಾದ್ ಸಂಸ್ಥೆಗೆ ಸದ್ಯ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ,ಇಂದು ಯು.ಎ.ಇ.ಯಿಂದ ಆಗಮಿಸುವವವರ ಪೈಕಿ ಯಾರನ್ನಾದರೂ ಅಲ್ ಮದೀನಾ ಸಂಸ್ಥೆಗೆ ಅಧಿಕೃತರು ಕಳಿಸುವುದಾದರೆ ಅವರನ್ನು ಸ್ವೀಕರಿಸುವ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸುವುದಕ್ಕಾಗಿ ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಉಸ್ಮಾನ್ ಸ’ಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರ ನಾಯಕತ್ವದಲ್ಲಿ ಸ್ಥಳೀಯ ಸಂಘಟನಾ ನಾಯಕರ ಮತ್ತು ಟೀಂ ಇಸಾಬಾ ತಂಡದ ಸಭೆಯು ಅಲ್ ಮದೀನಾ ಸಭಾಂಗಣದಲ್ಲಿ ನಡೆಯಿತು.
ಅವರಿಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ ಚರ್ಚಸಲಾಯಿತು.ಅವರಿಗೆ ವ್ಯವಸ್ಥೆ ಮಾಡಿಕೊಡಲು ಅಲ್ ಮದೀನಾ ಆಡಳಿತ ಸಮಿತಿಯು ಈಗಾಗಲೇ ನಿರ್ಣಯ ಕೈಗೊಂಡಿದ್ದು ಅವರಿಗೆ ಅಗತ್ಯವಾದ ಸೇವಾ ಸಹಕಾರ ಚಟುವಟಿಕೆಗಳನ್ನು ನಡೆಸಲು ಎಸ್.ವೈ.ಎಸ್.ನ ಸೇವಾ ವಿಭಾಗವಾದ ಟೀಂ ಇಸಾಬಾ ವನ್ನು ಸಂಪೂರ್ಣ ಸಜ್ಜುಗೊಳಿಸಲಾಗಿದೆ.
ಟೀಂ ಇಸಾಬಾ ದ.ಕ.ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಎಂ.ಕೆ.ಎಂ.ಇಸ್ಮಾಯಿಲ್ ಕಿನ್ಯ ಹಾಗೂ ಅವರ ತಂಡ ಇದರ ನೇತೃತ್ವವನ್ನು ವಹಿಸಿ ಕೊಂಡಿದೆ. ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಗತ್ಯವಾದ ಮಾರ್ಗ ನಿರ್ದೇಶನಗಳನ್ನು ನೀಡಲಾಯಿತು.
ಸಭೆಯಲ್ಲಿ ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ರಶೀದ್ ಝೈನೀ ನಿರ್ದೇಶನ ನೀಡಿದರು. ಎಸ್. ವೈ.ಎಸ್.ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕೆ.ಎಚ್.ಇಸ್ಮಾಯಿಲ್ ಸಅದಿ, ಅಲ್ ಮದೀನಾ ಡೈರೆಕ್ಟರ್ ಮುಹಮ್ಮದ್ ಕುಂಞಿ ಅಂಜದಿ, ಫಾರೂಖ್ ಅಬ್ಬಾಸ್ ಉಳ್ಳಾಲ, ಕಲ್ಕಟ್ಟ ಮೋನು, ಮುಹಮ್ಮದ್ ಮಾಸ್ಟರ್ ಕಲ್ಕಟ್ಟ, ಅಬ್ದುಲ್ ರಝಾಖ್ ನಾವೂರು, ಮೊಯ್ದಿನ್ ಕುಂಞಿ ಮೋಂಟುಗೋಳಿ ಮುಂತಾದವರು ಹಾಗೂ ಸ್ಥಳೀಯ ಟೀಂ ಇಸಾಬಾ ಸದಸ್ಯರು ಪಾಲ್ಗೊಂಡರು. ಇಸ್ಮಾಯಿಲ್ ಕಿನ್ಯ ಸ್ವಾಗತಿಸಿದರು.