janadhvani

Kannada Online News Paper

ಬಿಜೆಪಿ ಸಂಸದರು ಕೋಮು ಸೌಹಾರ್ದತೆಯನ್ನು ಮೂಡಿಸಬೇಕು- ಪ್ರಧಾನಿ ಕರೆ

ನವದೆಹಲಿ, ಮಾ.3: ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಮೂಡಿಸಲು ಬಿಜೆಪಿ ಸಂಸದರು ಶ್ರಮಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದು, ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಸಂಸತ್ ಭವನದ ಲೈಬ್ರರಿ ಕಟ್ಟಡದಲ್ಲಿ ನಡೆದ ಬಿಜೆಪಿ ಪಕ್ಷದ ಸಂಸದೀಯ ಸಭೆ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಈ ಕರೆ ನೀಡಿದ್ದಾರೆ.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಈಡೇರಿಸಲು ನಾವು ಇಲ್ಲಿಗೆ ಬಂದಿದ್ದೇವೆ. ರಾಷ್ಟ್ರ ನಮಗೆ ಅತ್ಯಂತ ಪರಮೋಚ್ಛವಾಗಿದ್ದು, ಅಭಿವೃದ್ದಿ ನಮ್ಮ ಮಂತ್ರವಾಗಿದೆ ಎಂದು ಪ್ರಧಾನಿ ಹೇಳಿದರು ಎಂದರು.

ಶಾಂತಿ, ಏಕತೆ ಹಾಗೂ ಸೌಹಾರ್ದತೆ ದೇಶದ ಅಭಿವೃದ್ದಿಗೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.
ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇತ್ತೀಚಿಗೆ ನಡೆದ ಗಲಭೆಗಳಲ್ಲಿ 46 ಮಂದಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ಕೆಲ ರಾಜಕೀಯ ಪಕ್ಷಗಳಿಗೆ ದೇಶದ ಹಿತಾಸಕ್ತಿಗಿಂತ ಪಕ್ಷದ ಹಿತರಕ್ಷಣೆಯೇ ಪರಮೋಚ್ಛವಾಗಿದೆ, ನಾವು ಇದರ ಫಲಿತಾಂಶ ಏನು ಎಂಬುದನ್ನು ನೋಡಿದ್ದೇವೆ. ಹಾಗಾಗಿ ಪಕ್ಷದ ಎಲ್ಲ ಸಂಸದರು ಸಮಾಜದಲ್ಲಿ ಶಾಂತಿ, ಏಕತೆ ಹಾಗೂ ಸೌಹಾರ್ದತೆ ಖಾತರಿ ಪಡಿಸಲು ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದ್ದಾರೆ.

ದೆಹಲಿಯ ಗಲಭೆಗಳಿಂದ ತೀವ್ರ ಘಾಸಿಗೊಂಡಿರುವ ಪ್ರಧಾನಿ, ಮಾತನಾಡುವಾಗ ಭಾವಾವೇಷಗೊಂಡಿದ್ದರು ಎಂದು ಸಚಿವ ಜೋಷಿ ಹೇಳಿದರು.

ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದವರು. ನಾವು ಈ ಸ್ಥಿತಿಗೆ ತಲುಪುತ್ತೇವೆ ಎಂದು ಅವರು ಯೋಚಿಸಿರಲಿಲ್ಲ. ದೇಶ ಪ್ರೇಮಕ್ಕಿಂತ ನಾವು ಪಕ್ಷಕ್ಕೆ ಏಕೆ ನಾವು ಅಷ್ಟೊಂದು ಮಹತ್ವ ನೀಡುತ್ತಿದ್ದೇವೆ..? ಎಂದು ಪ್ರಧಾನಿ ಪ್ರಶ್ನಿಸಿದರು ಎಂದು ಜೋಷಿ ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ತಾವರ್ ಚಂದ್ ಗೆಹ್ಲೋಟ್ ಸಭೆಯಲ್ಲಿ ಉಪಸ್ಥಿತರಿದ್ದರು.

ಸಂಸತ್ತಿನ ಉಭಯ ಸದನಗಳಲ್ಲಿ ಬಜೆಟ್ ಅಧಿವೇಶನದ ಎರಡನೇಯ ಚರಣದ ಮೊದಲ ದಿನವಾದ ಸೋಮವಾರ ಪ್ರತಿಪಕ್ಷಗಳು ದೆಹಲಿ ಗಲಭೆಯನ್ನು ಪ್ರಸ್ತಾಪಿಸಿ ಕಾರಣದ ಉಭಯ ಸದನಗಳನ್ನು ಹಲವು ಬಾರಿ ಮುಂದೂಡಬೇಕಾಯಿತು.

error: Content is protected !! Not allowed copy content from janadhvani.com