janadhvani

Kannada Online News Paper

ವಿವಾದಾತ್ಮಕ ‘ತ್ರಿವಳಿ ತಲಾಖ್ ಮಸೂದೆ’ ಗೆ ವಿಪಕ್ಷಗಳಿಂದ ವಿರೋಧ

ನವದೆಹಲಿ (ಜೂ.21): ವಿವಾದಾತ್ಮಕ ತ್ರಿವಳಿ ತಲಾಖ್ ಮಸೂದೆಗೆ ವಿಪಕ್ಷಗಳ ಬೆಂಬಲ ಕೋರಿ ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಕಾನೂನು ಸಚಿವ ರವಿಂಶರ್ ಮಂಡಿಸಿದ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳುಗಳು ವಿರೋಧಿಸಿದೆ.

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆಗಳಲ್ಲಿ ಈ ತ್ರಿವಳಿ ತಲಾಖ್ ಒಂದಾಗಿದೆ. ಮುಸ್ಲಿಂ ಮಹಿಳೆಯರ ರಕ್ಷಣೆ ನಮ್ಮ ಹೊಣೆ ಎಂಬುದು ಬಿಜೆಪಿ ಲೋಕಸಭಾ ಚುನಾವಣಾ ಭರವಸೆಗಳಲ್ಲಿ ಪ್ರಮುಖವಾಗಿದೆ.

ಇಂದು ಲೋಕಸಭೆಯಲ್ಲಿ ಮಂಡಿಸಿದ ಈ ಮಸೂದೆಗೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಇದೊಂದು ‘ತಾರತಮ್ಯ’ದಿಂದ ಕೂಡಿದ ಮಸೂದೆಯಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ತಿಳಿಸಿದ್ದಾರೆ. ಇನ್ನು ಕಾಂಗ್ರೆಸ್ ಈ ಮಸೂದೆಯಿಂದ ‘ಮಹಿಳಾ ಸಬಲೀಕರಣ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಸದನದಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆ, ಈ ಕುರಿತು ಮೊದಲು ಶಶಿ ತರೂರ್ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ವಾದವನ್ನು ತಳ್ಳಿ ಹಾಕಿದ ಸಚಿವ ರವಿಶಂಕರ್ ಪ್ರಸಾದ್ ‘ಕಾನೂನು ರೂಪಿಸುವುದು ಸಂಸತ್ತಿನ ಕೆಲಸ. ಕಾನೂನು ರಚನೆಯ ನಂತರ ಅದರ ಪಾಲನೆಯನ್ನು ನ್ಯಾಯಾಲಯಗಳಿಗೆ ಬಿಡಬೇಕು’ ಎಂದರು.

17ನೇ ಲೋಕಸಭಾ ಮೊದಲ ಅಧಿವೇಶನದ ಅಜೆಂಡಾ ಕುರಿತು ಚರ್ಚೆ ಹಾಗೂ ತ್ರಿವಳಿ ಕಾಯ್ದೆ ಪರ ಒಮ್ಮತ ಮೂಡಿಸುವ ಸಲುವಾಗಿ ಸರ್ಕಾರ ಜೂನ್ 19ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿತ್ತು.

ಮಸೂದೆ ಬದಲಾಗಿ ಅದರಲ್ಲಿನ ನಿಬಂಧನೆಗಳ ಕುರಿತು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಮುಸ್ಲಿಂ ವ್ಯಕ್ತಿಯೊಬ್ಬ ತ್ರಿವಳಿ ತಲಾಖ್ ನೀಡಿದಲ್ಲಿ ಆತ ಮೂರು ವರ್ಷದ ಶಿಕ್ಷೆಗೆ ಗುರಿಯಾಗುತ್ತಾನೆ. ಅಲ್ಲದೇ ಆರೋಪಿ ಮ್ಯಾಜಿಸ್ಟ್ರೇಟ್ ನ್ಯಾಯಲಯದಿಂದ ಮಾತ್ರ ಜಾಮೀನು ಪಡೆಯಬಹುದಾಗಿದೆ. ಅದು ವಿಚಾರಣೆ ಆರಂಭಕ್ಕೂ ಮೊದಲೇ ಆತನ ಹೆಂಡತಿ ಸಹಕರಿಸಿದಲ್ಲಿ ಮಾತ್ರ ಎಂಬುದಾಗಿ ಮಸೂದೆಯಲ್ಲಿದೆ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಸೂದೆಯ ಕಾನೂನಿನ ತೊಡಕಿನ ಬಗ್ಗೆ ಉಲ್ಲೇಖಿಸಿದೆ. ಅಲ್ಲದೇ ಸಂತ್ರಸ್ತ ಹೆಂಡತಿ ಹಾಗೂ ಮಕ್ಕಳಿಗೆ ರಾಜ್ಯದಿಂದ ಕೂಡ ಪರಿಹಾರ ಕೋರಿದೆ. ಮಸೂದೆಯಲ್ಲಿ ಗಂಡ ಮಾತ್ರ ಹೆಂಡತಿ ಮತ್ತು ಮಕ್ಕಳಿಗೆ ಜೀವನಾಂಶ ನೀಡುವುದನ್ನು ಪ್ರಸ್ತಾಪಿಸಲಾಗಿದೆ.

error: Content is protected !! Not allowed copy content from janadhvani.com