ಲಕ್ನೋ, ಮೇ 24: ಲೋಕಸಭಾ ಚುನಾವಣೆಯಲ್ಲಿ ಬಹುಜನ್ ಸಮಾಜ ಪಕ್ಷದ ಹೀನಾಯ ಸೋಲಿಗೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಇವಿಎಂಗಳನ್ನು ದೂರಿದ್ದಾರೆ. ‘‘ಇವಿಎಂಗಳ ಸಹಾಯದಿಂದ ಚುನಾವಣೆಯನ್ನು ಹೈಜಾಕ್ ಮಾಡಲಾಗಿದೆ’’ ಎಂದು ಅವರು ಬಿಜೆಪಿ ವಿರುದ್ಧ ಆರೋಪ ಹೊರಿಸಿದ್ದಾರೆ.
ಸಮಾಜವಾದಿ ಪಕ್ಷದೊಂದಿಗೆ ಮಹಾಮೈತ್ರಿ ಸಾಧಿಸಿದ್ದ ಮಾಯಾವತಿ ತಮ್ಮ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದೆಂಬ ಆತ್ಮವಿಶ್ವಾಸ ಹೊಂದಿದ್ದರೂ ಹಾಗಾಗಿಲ್ಲ.
‘‘ಇಡೀ ದೇಶವೇ ಇವಿಎಂಗಳನ್ನು ವಿರೋಧಿಸುತ್ತಿದೆ. ಇಂದಿನ ಫಲಿತಾಂಶದ ನಂತರ ಉಳಿದ ವಿಶ್ವಾಸವೂ ನಶಿಸುವುದು’’ ಎಂದು ಮಾಯಾವತಿ ಹೇಳಿದರು.
2017 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರವೂ ಮಾಯಾವತಿ ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ‘‘ದೇಶದ ವಿಶ್ವಾಸ ಮುರಿದು ಬಿದ್ದಿದೆ. ಚುನಾವಣಾ ಆಯೋಗ ಮತ್ತು ಬಿಜೆಪಿ ಕುರಿತಂತೆ ಏನೋ ಸಂಶಯಾಸ್ಪದ ವಿಚಾರವಿದೆ. ಇಬ್ಬರೂ ಮತ ಪತ್ರಗಳಿಗೆ ಒಪ್ಪುತ್ತಿಲ್ಲ’’ ಎಂದು ಮಾಯಾವತಿ ಹೇಳಿದರು.
ಇಂತಹ ಕಳಪೆ ನಿರ್ವಹಣೆ ನಿರೀಕ್ಷಿಸಿರಲಿಲ್ಲ ಎಂದ ಮಾಯಾವತಿ, ಜನರ ಭಾವನೆಗಳಿಗೆ ವಿರುದ್ಧವಾಗಿ ಈ ಫಲಿತಾಂಶ ಮೂಡಿ ಬಂದಿದೆ ಎಂದರು.