ನವದೆಹಲಿ (ಏ. 29): ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘಿಸಿದೆ ಈ ಕುರಿತು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ, ಆದರೆ ಆಯೋಗ ಈ ವಿಚಾರಣೆಯಲ್ಲಿ ವಿಳಂಬ ತೋರುತ್ತಿದೆ ಎಂದು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಸಲ್ಲಿಸಿದ ಅರ್ಜಿ ಸಲ್ಲಿಸಿದ್ದರು.
ಮೋದಿ ವಿರುದ್ಧ ಈ ವರೆಗೆ ದಾಖಲಾಗಿರುವ ಪ್ರಕರಣಗಳ ಕುರಿತು ಚುನಾವಣೆ ಆಯೋಗ ಇನ್ನು 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಅವರು ಇಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಈ ಅರ್ಜಿ ಸ್ವೀಕರಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನ್ ಗೋಗಯಿ, ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದರು.
ಈ ಕುರಿತು ಶನಿವಾರ ಮಾತನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, ಈಗಾಗಲೇ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಆಯೋಗಕ್ಕೆ ಕಾಂಗ್ರೆಸ್ ಪಕ್ಷ ದೂರು ಸಲ್ಲಿಸಿದೆ. ಆದರೂ ಕೂಡ ಚುನಾವಣಾ ಆಯೋಗ ಯಾಕೆ ಮೌನವಹಿಸಿದೆ ಎಂದು ಪ್ರಶ್ನಿಸಿದ್ದಾರೆ.
ಮೋದಿ ಮತ್ತು ಶಾ ಪದೇ ಪದೇ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಚುನಾವಣಾ ವೆಚ್ಚ, ಸೇನೆ ಮತ್ತು ಧರ್ಮದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಮುಂದಾಗಿದೆ.
ಚುನಾವಣಾ ವೆಚ್ಚ, ಸೇನೆ ಮತ್ತು ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ವಾರಾಣಸಿಗೆ ಬರಲು 79 ಲಕ್ಷ ರೂ.ಹಾಗೂ ನಾಯಕರ ಹೋಟೆಲ್ ವಾಸ್ತವ್ಯಕ್ಕೆ 8 ಲಕ್ಷ ರೂ. ಖರ್ಚು, ಸ್ಥಳೀಯ ವಾಹನ ವ್ಯವಸ್ಥೆಗಾಗಿ 6 ಲಕ್ಷ ರೂ.ಖರ್ಚು, ಪ್ರಚಾರ ಹಾಗೂ ಕಾರ್ಯಕರ್ತರನ್ನು ಕರೆತರಲು 27 ಲಕ್ಷ ರೂ. ಖರ್ಚು ಸೇರಿದಂತೆ ವಾರಾಣಸಿಯಲ್ಲಿ ರೋಡ್ಶೋಗೆ 1.27 ಕೋಟಿ ರೂ. ಖರ್ಚು ಮಾಡಲಾಗಿದೆ. ನಿಯಮದ ಪ್ರಕಾರ ಅಭ್ಯರ್ಥಿಯೊಬ್ವ 70 ಲಕ್ಷ ರೂ. ಮಾತ್ರ ಖರ್ಚು ಮಾಡಬೇಕು. ಈ ನಿಯಮ ಉಲ್ಲಂಘನೆ ಆಧಾರದ ಮೇಲೆ ಮೋದಿ ನಾಮಪತ್ರ ರದ್ದುಪಡಿಸುವಂತೆ ಮನವಿ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ.
ಕಾಂಗ್ರೆಸ್ ಮಾತ್ರವಲ್ಲದೇ ಈ ಕುರಿತು ಆಮ್ ಆದ್ಮಿ ಪಕ್ಷದಿಂದಲೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತಿದೆ. ಆಪ್ ಮುಖಂಡ ಸಂಜಯ್ ಸಿಂಗ್ ಬಿಜೆಪಿ ಚುನಾವಣಾ ವೆಚ್ಚದ ಕುರಿತು ಈಗಾಗಲೇ ದೂರು ಸಲ್ಲಿಸಿದ್ದು, ಆಪ್ ದೂರನ್ನು ಆಯೋಗ ಪರಿಗಣಿಸದ ಹಿನ್ನೆಲೆಯಲ್ಲಿ ಅವರು ಕೂಡ ಸುಪ್ರೀಂ ಕೋರ್ಟ್ ಮೊರೆಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.