ಬೆಂಗಳೂರು, ಮಾ.19- ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಸಂವಾದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಹಾಕಿದವರ ವಿರುದ್ಧ ಕಾನೂನು ಬಾಹಿರವಾಗಿ ಪೊಲೀಸರು ಕ್ರಮ ಜರುಗಿಸಿದರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಸಿದೆ.
ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸರ್ಕಾರದ ಸೂಚನೆಯಂತೆ ಮೋದಿ ಪರ ಜೈಕಾರ ಕೂಗಿದವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಿದರೆ ನಾವೂ ಕೂಡ ಸುಮ್ಮನಿರುವುದಿಲ್ಲ. ಪೊಲೀಸರ ವಿರುದ್ಧವೇ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಮೇಲೆ ಅಭಿಮಾನವಿಟ್ಟುಕೊಂಡು ಐಟಿಸೆಕ್ಟರ್ನ ನೌಕರರಾದ ಅಭಿಲಾಷ್, ಹರೀಶ್, ಗೌರವಚಕ್ರತೀರ್ಥ ಮತ್ತು ಶ್ರೀನಾಥ್ ಜೈಗೋಸ ಕೂಗಿದ್ದರಿಂದ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಅವರ ಬಳಿ ಇದ್ದ ಮೊಬೈಲ್ಗಳನ್ನು ಕಿತ್ತುಕೊಂಡು ಸುಳ್ಳು ಮೊಕದ್ದಮೆ ದಾಖಲಿಸಿ ಮುಂದೆ ಈ ರೀತಿ ನಡೆದುಕೊಂಡರೆ ಉಷಾರ್ ಎಂದು ಎಚ್ಚರಿಕೆ ನೀಡಲಾಗಿದೆ. ಇದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಕಿಡಿಕಾರಿದರು.
ಅವರಿಗೆ ನಾವು ಎಲ್ಲಾ ರೀತಿಯ ಕಾನೂನು ಬೆಂಬಲ ಸೇರಿದಂತೆ ಎಲ್ಲಾ ರೀತಿಯ ನೆರವನ್ನು ಬಿಜೆಪಿ ನೀಡಲಿದೆ. ಜೈಕಾರ ಕೂಗಿದವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಅಭಿಮಾನವಿಟ್ಟುಕೊಂಡು ಜೈಕಾರ ಹಾಕಿದವರನ್ನೆಲ್ಲಾ ಬಿಜೆಪಿ ಕಾರ್ಯಕರ್ತರು ಎನ್ನಲು ಸಾಧ್ಯವೆ ಎಂದು ಅಶೋಕ್ ಪ್ರಶ್ನಿಸಿದರು.
ಈಗಾಗಲೇ ನಗರ ಪೊಲೀಸ್ ಆಯುಕ್ತರು ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದೇನೆ. ಒಂದು ವೇಳೆ ಸುಳ್ಳು ಮೊಕದ್ದಮೆ ದಾಖಲಿಸಿದ್ದರೆ ಕಾನೂನು ಹೋರಾಟಕ್ಕೆ ಬಿಜೆಪಿ ಸಿದ್ದವಿದೆ ಎಂದು ಹೇಳಿದರು.
ರಾಹುಲ್ಗಾಂಧಿ ಹೋದಕಡೆಯಲೆಲ್ಲಾ ಈ ರೀತಿ ನಡೆದಿರುವುದು ಹೊಸದೇನಲ್ಲ. ಈ ಹಿಂದೆ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಕಾಂಗ್ರೆಸ್ ಸಂವಾದ ಆಯೋಜಿಸಿದ್ದಾಗ ಅಲ್ಲಿಯೂ ಕೂಡ ಮೋದಿ ಪರವಾಗಿ ಜೈಕಾರ ಹಾಕಲಾಗಿತ್ತು.ಇದನ್ನು ಸಹಿಸದ ಕಾಂಗ್ರೆಸಿಗರು ಜೈಕಾರ ಹಾಕಿದವರನ್ನೆಲ್ಲಾ ಬಿಜೆಪಿ ಕಾರ್ಯಕರ್ತರು ಎಂದು ಹೇಳುತ್ತಿದೆ. ಇದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ವಾಗ್ದಾಳಿ ನಡೆಸಿದರು.
Sick minded