ಬೆಂಗಳೂರು:ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ಸೆಸ್ಸೆಫ್ ಇದರ ಐತಿಹಾಸಿಕ ಸುವರ್ಣ ಮಹೋತ್ಸವ ‘ಗೋಲ್ಡನ್ ಫಿಫ್ಟಿ’ ಸಮ್ಮೇಳನವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬೆಳಗ್ಗೆ ಅದ್ದೂರಿಯಾಗಿ ಚಾಲನೆಗೊಂಡಿದೆ.

ಬೆಳಗ್ಗೆ ಆರಂಭಗೊಂಡ ಉದ್ಘಾಟನಾ ಸಮಾವೇಶದಲ್ಲಿ, ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ವಖ್ಫ್ ಸಚಿವರಾದ ಬಿ. ಝಡ್. ಝಮೀರ್ ಅಹ್ಮದ್ ಖಾನ್ ಮಾತನಾಡಿ, ರಾಜ್ಯದ ಎಲ್ಲಾ ಮಸೀದಿಗಳ ಮುಅಝಿನ್ ಗಳಿಗೆ ರಾಜ್ಯ ವಖ್ಫ್ ಇಲಾಖೆ ವತಿಯಿಂದ ಮನೆ ನಿರ್ಮಿಸಿ ಕೊಡುವ ಕಾರ್ಯವನ್ನು ಶೀಘ್ರವಾಗಿಯೆ ನಡೆಸಲಿದ್ದೇವೆ ಎಂದು ಘೋಷಿಸಿದರು.
ಮದ್ರಸಾ ರಂಗವನ್ನು ಕೇರಳ ಮಾದರಿಯಂತೆ ಇನ್ನಷ್ಟು ಉನ್ನತಿಗೊಳಿಸಲಿದ್ದೇವೆ ಎಂದ ಸಚಿವರು, ಕೇರಳದ ಮಅದಿನ್ ಸಂಸ್ಥೆಯ ವರ್ಣನೆ ಮತ್ತು ವಿದ್ಯಾಭ್ಯಾಸದ ತತ್ವ ಮತ್ತು ಆಚಾರಗಳನ್ನು ಕರ್ನಾಟಕಾದ್ಯಂತ ಅಳವಡಿಸಲು ಇದೀಗಾಗಲೇ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದರು.


ಮಸೀದಿಗಳಲ್ಲಿ ಮುಅಝಿನ್ ಕೆಲಸಮಾಡುವವರಿಗೆ ದೊರೆಯುವ ಸಣ್ಣ ವೇತನಗಳಿಂದ ಅವರ ಕುಟುಂಬ ನಿರ್ವಹಿಸುವುದೇ ಬಹಳ ಕಷ್ಟದ ಪರಿಸ್ಥಿತಿ, ಈ ನಿಟ್ಟಿನಲ್ಲಿ ಮುಅಝಿನ್ ಉಸ್ತಾದರುಗಳಿಗೆ ಸರಕಾರದಿಂದಲೇ ಮನೆ ನಿರ್ಮಿಸಿಕೊಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ವಿದ್ಯಾರ್ಥಿ ಸಮಾವೇಶದಲ್ಲಿ ವಖ್ಫ್ ಸಚಿವರು ಹೇಳಿದರು.
ಎಸ್ಎಸ್ಎಫ್ ವಿದ್ಯಾರ್ಥಿಗಳ ಶಿಸ್ತನ್ನು ಕಂಡು ಅಚ್ಚರಿಗೊಂಡ ಸಚಿವರು, ಈ ಸಂಘಟನೆ ರಾಜ್ಯಕ್ಕೆ ಸಾಮಾಜಿಕವಾಗಿಯೂ, ಶೈಕ್ಷಣಿಕವಾಗಿಯೂ ಅತೀ ಅಗತ್ಯ ಎಂದರು.


ಕಾರ್ಯಕ್ರಮದಲ್ಲಿ ಮಅದಿನ್ ಸಂಸ್ಥೆಯ ಚೇರ್ಮ್ಯಾನ್ ಸಯ್ಯಿದ್ ಖಲೀಲುಲ್ ಬುಖಾರಿ ಅವರು ಕಾರ್ಯಕರ್ತರಿಗೆ ಉತ್ತಮ ಸಂದೇಶವನ್ನು ನೀಡಿದರು.







