ಸುರತ್ಕಲ್,ಆಗಸ್ಟ್.2: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ಜುಲೈ 28ರಂದು ನಡೆದ ಮೊಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಂಗಳೂರಿನ ತಮ್ಮ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಖಚಿತ ಮಾಹಿತಿ ಮೇರೆಗೆ ನಮ್ಮತಂಡವು ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಉಡುಪಿಯ ಉದ್ಯಾವರ ಬಳಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರನ್ನು ಬಜೈ ನಿವಾಸಿ ಸುಹಾಸ್ ಶೆಟ್ಟಿ(29), ಮೋಹನ್ ಅಲಿಯಾಸ್ ಮೋಹನ್ ಸಿಂಗ್, ಗಿರಿಧರ್ (23), ಅಭಿಷೇಕ್(21), ಶ್ರೀನಿವಾಸ್(23), ದೀಕ್ಷಿತ್(21) ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಒಬ್ಬರಿಗೊಬ್ಬರು ಮುಖತಃ ಪರಿಚಯವಿರಲಿಲ್ಲ. ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡು ಕೊಲೆ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಇನ್ನಷ್ಟು ಮಂದಿಯ ಬಂಧನ ನಡೆಯಲಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಜುಲೈ 28ರ ರಾತ್ರಿ 8 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಸುರತ್ಕಲ್ ಅಂಗಡಿಯೊಂದರ ಮುಂದೆ ನಿಂತಿದ್ದ ಫಾಝಿಲ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಅವರು ಬದುಕುಳಿಯಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಮೊದಲಿಗೆ ಕಾರು ಮಾಲೀಕ ಅಜಿತ್ ಕ್ರಾಸ್ತನನ್ನು ಬಂಧಿಸಿದೆವು. ಅವನ ವಿಚಾರಣೆ ನಡೆಸಿದಾಗ ಆರೋಪಿಗಳು ಮೂರು ದಿನದ ಬಾಡಿಗೆಗೆ 15 ಸಾವಿರ ನೀಡುವ ಆಸೆ ತೋರಿಸಿದ್ದರು. ಆತ ಹೆಚ್ಚಿನ ಹಣದಾಸೆಗಾಗಿ ಕಾರನ್ನು ಆರೋಪಿಗಳಿಗೆ ನೀಡಿದ್ದ ಎಂದು ತಿಳಿದುಬಂತು. ಈ ಮಾಹಿತಿಯ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದೆವು ಎಂದರು.
ಆರೋಪಿಗಳು ಆರೇಳು ಜನರನ್ನು ಟಾರ್ಗೆಟ್ ಮಾಡಲಾಗಿತ್ತು. ಅದರಲ್ಲಿ ಮುಖ್ಯವಾಗಿ ಫಾಝಿಲ್ನನ್ನು ಗುರಿಯಾಗಿಸಿಕೊಂಡಿದ್ದರು. ಇದು ಅಚಾನಕ್ ಆಗಿ ನಡೆದ ಕೃತ್ಯವಲ್ಲ. ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಿದರು.
ಕಾರಿನ ಮಾಲೀಕ ಅಜಿತ್ ಕ್ರಾಸ್ತನನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಬಳಿಕ ಹತ್ಯೆಗೆ ಬಳಸಿದ್ದ ಕಾರು ಉಡುಪಿ ಜಿಲ್ಲೆಯ ಇನ್ನಾ ಗ್ರಾಮದ ಕಡೆಕುಂಜದಲ್ಲಿ ಭಾನುವಾರ ಪತ್ತೆಯಾಗಿತ್ತು. ಅಜಿತ್ ಕ್ರಾಸ್ತಾ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಹತ್ಯೆಗೆ ಪ್ರೇಮ ಪ್ರಕರಣ ಮತ್ತು ಫಾಜಿಲ್ ಸಮುದಾಯದವರ ಒಳಗಡೆ ಇರುವ ಪಂಗಡಗಳ ನಡುವೆ ಆದಂತಹ ವ್ಯತ್ಯಾಸಗಳೇ ಕಾರಣ ಎಂಬ ಸುದ್ದಿಗಳು ಹಬ್ಬಿದ್ದವು, ಆದರೆ ಕೃತ್ಯಕ್ಕೆ ಇವ್ಯಾವುದೇ ಕಾರಣಗಳಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಬಂಧಿಸಲಾಗಿರುವ ಆರು ಮಂದಿ ಆರೋಪಿಗಳ ಪೈಕಿ ಸುಹಾಸ್ ಶೆಟ್ಟಿ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಬೆಳ್ತಂಗಡಿಯಲ್ಲಿ ಒಂದು ಪ್ರಕರಣ, ಮೋಹನ್ ಅಲಿಯಾಸ್ ಮೋಹನ್ ಸಿಂಗ್ ಮೇಲೆ ಸುರತ್ಕಲ್ ಮತ್ತು ಕಾವೂರು ಠಾಣೆಯಲ್ಲಿ ತಲಾ ಒಂದು, ಗಿರಿಧರ್ ಮತ್ತು ಅಭಿಷೇಕ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರಕರಣ, ಶ್ರೀನಿವಾಸ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಮೂರು, ಉರ್ವ ಠಾಣೆಯಲ್ಲಿ ಒಂದು ಮತ್ತು ದೀಕ್ಷಿತ್ ವಿರುದ್ಧ ಸುರತ್ಕಲ್, ಕಾವೂರು ಮತ್ತು ಮಂಗಳೂರು ಪೂರ್ವ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ಈಗಾಗಲೇ ದಾಖಲಾಗಿತ್ತು ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಹಾಗೂ ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ಮಹೇಶ್ ಕುಮಾರ್ ಹಾಗೂ ಸಿಸಿಬಿ ಇನ್ಸ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.







