janadhvani

Kannada Online News Paper

ಹಿಜಾಬ್ ವಿವಾದವನ್ನು ಮುಂದಿಟ್ಟು ರಾಜಕೀಯ ಲಾಭ ಪಡೆಯುವ ಕನಸು, ನನಸಾಗದು – ಎಸ್ಸೆಸ್ಸೆಫ್

ಮಂಗಳೂರು: ಕೋರ್ಟ್ ತೀರ್ಪನ್ನು ದುರ್ವ್ಯಾಖ್ಯಾನಗೊಳಿಸಿ ಶಿರವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ತಡೆಯುವ ಹುನ್ನಾರವನ್ನು ಖಂಡಿಸಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ (ವೆಸ್ಟ್ ಹಾಗೂ ಈಸ್ಟ್) ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಬಳಿಕ ಎಸ್ಸೆಸ್ಸೆಫ್ ನಿಯೋಗವು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿತು.

ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವುರವರ ಅಧ್ಯಕ್ಷತೆಯಲ್ಲಿ,ಸಯ್ಯಿದ್ ಮದಕ ತಂಙಳ್ ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಕಾರ್ಯಕ್ರಮವನ್ನು ಉಧ್ಘಾಟಿಸಿ, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪಾಲಿಸುವ ಬದಲು ದುರ್ವಾಖ್ಯಾನ ಮಾಡಲಾಗುತ್ತಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಕೂಡ ಗೊಂದಲ ಸೃಷ್ಟಿಸುತ್ತಿದೆ. ಇದರಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರಿದೆ ಎಂದರು.

ಸಮಾಜ, ಸರಕಾರ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಬದಲು ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಹಿಜಾಬ್ ವಿವಾದದಿಂದ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಗೊಂದಲದ ವಾತಾವರಣದಿಂದ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ. ಈ ವಿವಾದದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿರುವುದು ವಿಪರ್ಯಾಸ ಎಂದು ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಹೇಳಿದರು.

ಸಿರಾಜುದ್ದೀನ್ ಸಖಾಫಿ ಕನ್ಯಾನರವರು ಮಾತನಾಡಿ, ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರ ದೊಡ್ಡ ಎಡವಟ್ಟಿನಿಂದಾಗಿ, ಕಾಲೇಜಿನ ಕಚೇರಿಯಲ್ಲೇ ಚರ್ಚಿಸಿ ಮುಗಿಸಬೇಕಾಗಿದ್ದ,ಶೆಕ್ಷಣಿಕ ಕೇಂದ್ರಗಳ ಮಟ್ಟಿಗೆ ಅತ್ಯಂತ ಸಣ್ಣ ವಿಚಾರವಾಗಿರುವ, ಧಾರ್ಮಿಕವಾಗಿ ಬಲು ದೊಡ್ಡ ಪ್ರಾಮುಖ್ಯತೆಯುಳ್ಳ ಹಿಜಾಬ್ ಅಥವಾ ಶಿರವಸ್ತ್ರ ವಿವಾದವು ಇಂದು ಇಡೀ ರಾಜ್ಯ ಮತ್ತು ದೇಶವನ್ನೂ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದೆ.

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಸರ್ಕಾರೀ ಶಾಲಾ,ಕಾಲೇಜು ಹಾಗೂ ಕಚೇರಿಗಳಲ್ಲಿ ಇತರ ಧರ್ಮೀಯರ ಆಚಾರ ವಿಚಾರಗಳು ಹೇರಳವಾಗಿ ನಡೆಯುತ್ತಿದೆ. ವಿಶಿಷ್ಟ ದಿವಸಗಳಲ್ಲಿ ಪೂಜೆಗಳೂ ನಡೆಯುತ್ತಿವೆ. ಅದನ್ನು ಈ ವರೆಗೆ ಯಾರೂ ವಿರೋಧಿಸಿಲ್ಲ, ವಿರೋಧಿಸುವುದೂ ಇಲ್ಲ.
ಹಿಜಾಬ್ ಎಂಬ ಗುಮ್ಮನನ್ನು ಮುಂದಿಟ್ಟು, ತನ್ನ ವರ್ಷಾಂತರಗಳಿಂದ ಜಪಿಸುತ್ತಾ ಬಂದಿರುವ ಸಿದ್ಧಾಂತವನ್ನು ಜಾರಿಗೆ ತರಲು ಪ್ರಯತ್ನಿಸುವುದಾದರೆ, ಇಲ್ಲವೇ, ಈ ಒಂದು ವಿವಾದವನ್ನು ಸದಾ ಜೀವಂತವಾಗಿರಿಸಿ ರಾಜಕೀಯ ಲಾಭ ಪಡೆಯುವ ತಿರುಕನ ಕನಸನ್ನು ಯಾವುದೇ ರಾಜಕೀಯ ಪಕ್ಷವು ಕಾಣುತ್ತಿದ್ದರೆ, ಅದು ಈ ಭಾರತದಲ್ಲಿ ಕೇವಲ ಕನಸಾಗಿಯೇ ಉಳಿಯಲಿದೆ ಎಂದು ಸಿರಾಜುದ್ದೀನ್ ಸಖಾಫಿ ಕನ್ಯಾನ ರವರು ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದರು.
ದ.ಕ ಈಸ್ಟ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ಸ್ವಾಗತಿಸಿ, ಎಸ್ಸೆಸ್ಸೆಫ್ ದ.ಕ ಈಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಮುನ್ನುಡಿ ಭಾಷಣ ಮಾಡಿದರು. ವೆಸ್ಟ್ ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವು, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್ ಹಾಗೂ ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಅಕೀಲ್ ಹಸನ್ ಮಾತನಾಡಿದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ರಾಜ್ಯ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರಲಿ ಕಾಟಿಪಳ್ಳ,ಕೋಶಾಧಿಕಾರಿ ಇಕ್ಬಾಲ್ ಮಧ್ಯನಡ್ಕ ಸಹಿತ ರಾಜ್ಯ ಹಾಗೂ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. ನೌಫಲ್ ಫರೀದ್ ನಗರ ನಿರೂಪಿಸಿ,ವೆಸ್ಟ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಹಮೀದ್ ತಲಪಾಡಿ ಧನ್ಯವಾದ ಸಮರ್ಪಿಸಿದರು.