janadhvani

Kannada Online News Paper

“ಮುಸಲ್ಮಾನ್ ಗೂಂಡಾಗಳಿಂದ ಹತ್ಯೆ”- ಈಶ್ವರಪ್ಪ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ಖಂಡನೆ

ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರಪ್ಪರ ಹೇಳಿಕೆ ಸರಿಯಲ್ಲ. ಇದು ಅಶಾಂತಿ ಸೃಷ್ಟಿಸುವ ಹೇಳಿಕೆ.

ಬೆಂಗಳೂರು,ಫೆ.21: ಶಿವಮೊಗ್ಗದಲ್ಲಿ ನಿನ್ನೆ ನಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಹೇಳಿಕೆಯನ್ನು ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದಾರೆ.

ಮುಸಲ್ಮಾನ್ ಗೂಂಡಾಗಳಿಂದ ಹತ್ಯೆಯಾಗಿದೆ ಎಂಬ ಈಶ್ವರಪ್ಪ ಹೇಳಿಕೆ ಆರೋಪದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರಪ್ಪರ ಹೇಳಿಕೆ ಸರಿಯಲ್ಲ. ಇದು ಅಶಾಂತಿ ಸೃಷ್ಟಿಸುವ ಹೇಳಿಕೆ. ಇದು ಅವರ ಸ್ಥೂಲ ಕಲ್ಪನೆ. ಅಪರಾಧಿಗಳು ಯಾರು ಎಂಬುದು ಇನ್ನೂ ತನಿಖೆಯೇ ಆಗಿಲ್ಲ. ಆಗಲೇ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈಶ್ವರಪ್ಪ ಅವರು ಜನರನ್ನು ದಾರಿ ತಪ್ಪಿಸಲು ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ನಾವು ರಾಜೀನಾಮೆ ಕೇಳುತ್ತಿದ್ದೇವೆ. ಅದನ್ನ ಅವರು ಕೊಡಲೇಬೇಕು. ಪೋಲಿಸರ ತನಿಖೆಯಾಗದೆ ಆಪಾದನೆ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಪೋಲಿಸರು ತನಿಖೆ ನಡೆಸುವುದು ಅವರ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಏನು ಮಾಡುತ್ತಿದೆ? ಡಿ.ಕೆ ಶಿವಕುಮಾರ್ ಮೇಲೆ ಆಪಾದನೆ ಮಾಡಿ ಏನೂ ಸಾಧಿಸಲಾಗದು. ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಸಚಿವರಾಗಿದ್ದಾರೆ ಎಂದು ಸಚಿವ ಈಶ್ವರಪ್ಪ ಅವರಿಗೆ ಹರಿಪ್ರಸಾದ್ ತಿರುಗೇಟು ನೀಡಿದರು.