janadhvani

Kannada Online News Paper

ಓಮಿಕ್ರಾನ್ ಸೋಂಕು ತೀವ್ರ ಏರಿಕೆ- ರಾಜ್ಯದಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆ

ಈ ನಿಟ್ಟಿನಲ್ಲಿ ಜನವರಿ 7 ರಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರು: ಓಮಿಕ್ರಾನ್ ಸೋಂಕು ತೀವ್ರವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜನವರಿ 7 ರಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಈ ಕುರಿತಾಗಿ ಕಂದಾಯ ಸಚಿವ ಆರ್‌. ಅಶೋಕ್ ಮಾತನಾಡಿ, ಮೂರನೇ ಅಲೆ ಬರೋದು ನಿಶ್ಚಿತ ಅನ್ನುವ ವಾತಾವರಣ ಇದೆ. ಬೆಂಗಳೂರು ರೆಡ್ ಝೋನ್ ಅಂತ ಕೇಂದ್ರ ಗುರುತಿಸಿದೆ. ಈ ನಿಟ್ಟಿನಲ್ಲಿ ಜನವರಿ 7 ಕ್ಕೂ ಮುನ್ನ ಒಂದು ಸಭೆ ಮಾಡ್ತೇವೆ. ಈ ಸಭೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತದೆ. ತಜ್ಞರು ಮಾಡುವ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿ ಮಾಡ್ತೇವೆ ಎಂದು ತಿಳಿಸಿದರು.

ಈ ಬಾರಿ ಯಾವುದೇ ಅಚಾತುರ್ಯ ಆಗದಂತೆ ಎಲ್ಲ ರೀತಿಯ ತಯಾರಿ ನಡೆಸಲಾಗುವುದು. ಈ ನಿಟ್ಟಿನಲ್ಲಿ ಸಭೆ ಮಾಡಲಾಗುವುದು. ಸಾರ್ವಜನಿಕರು ಸರ್ಕಾರ ತರುವ ಕಠಿಣ ನಿರ್ಬಂಧಕ್ಕೆ ಸಹಕಾರ ಕೊಡಬೇಕು. ಇಲ್ಲದೇ ಇದ್ದಲ್ಲಿ, ನಾವು ಕೂಡಾ ಪಶ್ಚಿಮ ಬಂಗಾಳ, ಮುಂಬಯಿ ಮಾದರಿಯಲ್ಲಿ ಬೆಂಗಳೂರಿನಲ್ಲೂ‌ ಲಾಕ್ಡೌನ್ ಮಾಡಬೇಕಾಗುತ್ತೆ ಎಂದರು.

ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಮೂರನೇ ಅಲೆ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಈಗಾಗಲೇ ರಾತ್ರಿ 10 ರಿಂದ ಬೆಳಗ್ಗೆ ಐದರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದೀಗ ಮತ್ತಷ್ಟು ನಿರ್ಬಂಧಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧಾರ ಮಾಡಿದೆ. ಜನವರಿ 7 ರ ಒಳಗಾಗಿ ಸಿಎಂ ನೇತೃತ್ವದ ಸಭೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.