ಕುವೈತ್ ಸಿಟಿ :ಭಾರತದಲ್ಲಿ ಮುಸ್ಲಿಮರ ಮೇಲೆ ಮರುಕಳಿಸುತ್ತಿರುವ ದೌರ್ಜನ್ಯಗಳ ವಿರುದ್ಧ ಕುವೈತ್ ಸಂಸದರು ಜಂಟಿ ಹೇಳಿಕೆಯನ್ನು ನೀಡಿದ್ದಾರೆ. ಅಸ್ಸಾಂನಲ್ಲಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದ್ದು, ಅಂತರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸುವಂತೆ ಹೇಳಿಕೆಯಲ್ಲಿ ಕರೆ ನೀಡಲಾಗಿದೆ.
ಮುಸ್ಲಿಮರನ್ನು ಕೊಲ್ಲುವುದು ಮತ್ತು ತಮ್ಮ ಮನೆಗಳಿಂದ ಹೊರಹಾಕುವುದು ಭಾರತದಲ್ಲಿ ಪುನರಾವರ್ತನೆಯಾಗುತ್ತಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು ಮತ್ತು ಇದನ್ನು ಕೊನೆಗೊಳಿಸಬೇಕು. ಭಾರತೀಯ ಮುಸ್ಲಿಮರು ತಮ್ಮ ದೇಶದಲ್ಲಿ ಶಾಂತಿಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ.ಅದನ್ನು ನಿರಾಕರಿಸುವ ರೀತಿಯಲ್ಲಿ ನಡೆಸುವ ಸಂಘಟಿತ ಹಿಂಸೆಯನ್ನು ಯುದ್ಧ ಅಪರಾಧವೆಂದು ಪರಿಗಣಿಸಿ ಅಂತರಾಷ್ಟ್ರೀಯ ಸಮುದಾಯವು ಮಧ್ಯೆ ಪ್ರವೇಶಿಸಬೇಕು.
ಹಿಂದುತ್ವ ಶಕ್ತಿಗಳ ದಾಳಿಯನ್ನು ಭಾರತೀಯ ಸರ್ಕಾರ ಖಂಡಿಸುವುದಿಲ್ಲ ಮತ್ತು ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಕುವೈತ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕುರಿತು ಹೇಳಿಕೆ ನೀಡಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.
ಅವ್ಖಾಫ್ ಸಚಿವಾಲಯವು ಸಂತ್ರಸ್ತರಿಗಾಗಿ ಪ್ರಾರ್ಥಿಸುವಂತೆ ಇಮಾಮ್ಗಳಿಗೆ ನಿರ್ದೇಶನ ನೀಡಬೇಕು. ಮುಸ್ಲಿಂ ಬಾಂಧವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಇಸ್ಲಾಮಿಕ್ ಸಂಸ್ಥೆಗಳು ಮಧ್ಯಪ್ರವೇಶಿಸಬೇಕು ಎಂದು ಸಂಸದರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







