janadhvani

Kannada Online News Paper

ಪ್ರವಾಸಿ ತಾಣಗಳಲ್ಲಿ ಜನ ಸಾಗರ: ಮತ್ತೆ ಲಾಕ್‌ಡೌನ್ ಎಚ್ಚರಿಕೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ,ಜು.06: ಕೊರೋನಾ 2ನೇ ಅಲೆಯಿಂದ, ಕಠಿಣ ನಿರ್ಬಂಧ, ಸೂಕ್ತ ಚಿಕಿತ್ಸೆ ಹಾಗೂ ಲಸಿಕೆ ಮೂಲಕ ವೈರಸ್ ನಿಯಂತ್ರಣಕ್ಕೆ ಬಂದಿದೆ.ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಅನ್‌ಲಾಕ್ ಜಾರಿಯಾಗಿದೆ. ಅನ್‌ಲಾಕ್ ಒಂದೊಂದೆ ಹಂತಕ್ಕೆ ವಿಸ್ತರಣೆಯಾಗುತ್ತಿದ್ದಂತೆ ಇದೀಗ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮತ್ತೆ ಲಾಕ್‌ಡೌನ್ ಎಚ್ಚರಿಕೆ ನೀಡಿದೆ.

ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಲಾಕ್‌ಡೌನ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಅನ್‌ಲಾಕ್ ಘೋಷಣೆಯಾದ ಬೆನ್ನಲ್ಲೇ ಹಿಮಾಚಲ ಪ್ರದೇಶ, ಕುಲು, ಮನಾಲಿ ಸೇರಿದಂತೆ ಪ್ರವಾಸಿ ತಾಣಗಳಿಗೆ ಜನ ಸಾಗರವೇ ಹರಿದುಬಂದಿದೆ. ಶೇಕಡಾ 90 ರಷ್ಟು ಕೊರೋನಾ ನಿಯಮ ಪಾಲಿಸುತ್ತಿಲ್ಲ. ಇದು ಅಪಾಯಕ್ಕೆ ಅಹ್ವಾನ ನೀಡಿದಂತೆ. ಹೀಗಾಗಿ ಮತ್ತೊಂದು ಲಾಕ್‌ಡೌನ್ ಸಂಕಷ್ಟ ತರಬೇಡಿ ಎಂದು ಜನರಿಗೆ ಎಚ್ಚರಿಸಿದ್ದಾರೆ.

ಮಸೂರಿ, ಉತ್ತರಖಂಡ, ಶಿಮ್ಲಾ, ಧರ್ಮಶಾಲಾದಲ್ಲೂ ಪ್ರವಾಸಿಗರು ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಕೊರೋನಾ ಮಾರ್ಗಸೂಚಿ ಪಾಲನೆ ಅಗತ್ಯ. 2ನೇ ಅಲೆ ಇನ್ನೂ ಸಂಪೂರ್ಣವಾಗಿ ತಗ್ಗಿಲ್ಲ. ಜೊತೆಗೆ ಡೆಲ್ಟಾ ಪ್ಲಸ್, 3ನೇ ಅಲೆ ಭೀತಿ ಕೂಡ ನಮ್ಮ ಮುಂದಿದೆ. ಹೀಗಾಗಿ ಜನರ ಅಜಾಗರೂಕತೆಯಿಂದ ಅಮಾಯಕರನ್ನು ಬಲಿಯಾಗಿಸಬೇಡಿ ಎಂದು ಲಾವ್ ಅಗರ್ವಾಲ್ ಎಚ್ಚರಿಸಿದ್ದಾರೆ.