janadhvani

Kannada Online News Paper

ದೇಶದ ಅರ್ಥಿಕ ಹಿಂಜರಿತವನ್ನು ಮರೆಮಾಚಲು CAA, NRC ಯನ್ನು ತರುತ್ತಿದ್ಧಾರೆ

ಬೆಂಗಳೂರು,ಡಿ. 27: ದೇಶದ ಅರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತಿರುವ ವಿಚಾರವನ್ನು ಮರೆಮಾಚಲು ಬಿಜೆಪಿ ಪೌರತ್ವ ಕಾಯ್ದೆ, ಎನ್ಆರ್ಸಿಯನ್ನು ತರುತ್ತಿದೆ ಎಂದು ಮಾಜಿ ಕಾಂಗ್ರೆಸ್ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ಧಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಆರೆಸ್ಸೆಸ್ ನಾಯಕರು ಪ್ರಧಾನಿ ಮೋದಿಯ ಕಿವಿ ಹಿಂಡಬೇಕು ಎಂದು ಸಲಹೆ ನೀಡಿದ್ಧಾರೆ.

ಆರೆಸ್ಸೆಸ್ ನಾಯಕರು ಪ್ರಧಾನಿಯವರ ಕಿವಿ ಹಿಂಡಿದ್ದರೆ ಪೌರತ್ವ ಕಾಯ್ದೆಯ ಪ್ರತಿಭಟನೆಗಳು ನಡೆಯುತ್ತಿರಲಿಲ್ಲ. ಈಗ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರಗಳಿಗೆ ಬಿಜೆಪಿಯವರೇ ನೇರ ಹೊಣೆಯಾಗಿದ್ಧಾರೆ ಎಂದು ವಿ.ಎಸ್. ಉಗ್ರಪ್ಪ ಆಪಾದಿಸಿದರು.

ಕೇಂದ್ರ ಸರ್ಕಾರ ಆರ್ಥಿಕತೆ ಸುಧಾರಿಸುವ ಕೆಲಸ ಮಾಡುತ್ತಿಲ್ಲ. ಪರಿಸ್ಥಿತಿ ಹೇಗೇ ಮುಂದುವರಿದರೆ ದೇಶಕ್ಕೆ ಕಷ್ಟವಾಗುತ್ತದೆ. ದೇಶವು ಬಿಜೆಪಿ ಮುಕ್ತವಾಗಲಿದೆ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರೇ ಇದನ್ನೂ ಹೇಳಿದ್ಧಾರೆ. ಕೇಂದ್ರ ಸರ್ಕಾರವು ರಕ್ಷಣಾ ವೆಚ್ಚವನ್ನೂ ಕಡಿತ ಮಾಡಿದ್ಧಾರೆ. 1 ಲಕ್ಷ ಕೋಟಿ ಅನುದಾನ ಕಡಿತ ಮಾಡಿದ್ಧಾರೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಇದನ್ನು ಮರೆಮಾಚಲು ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೊಂದಣಿ ಯೋಜನೆಯನ್ನು ಬಿಜೆಪಿಯವರು ತರುತ್ತಿದ್ದಾರೆ ಎಂದು ಹೇಳಿದರು.

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿ ಹೋರಾಟದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ಇದಕ್ಕೆ ಬಿಜೆಪಿಯವರೇ ನೇರ ಕಾರಣರಾಗಿದ್ದಾರೆ. ಪಿಎಫ್ಐ ಮೂಲಕ ಬಿಜೆಪಿಯವರೇ ಗಲಭೆ ಸೃಷ್ಟಿಸಿದ್ದಾರೆ. ಗಲಭೆಗೆ ಕುಮ್ಮಕ್ಕು ನೀಡಿ ಘರ್ಷಣೆ ಮಾಡಿಸಿದ್ಧಾರೆ. ಬಿಜೆಪಿ ರಾಜ್ಯಗಳಲ್ಲೇ ಈ ಹಿಂಸಾಚಾರ ಘಟನೆಗಳು ನಡೆಯುತ್ತಿರುವುದನ್ನು ಗಮನಿಸಿದರೆ ಆರ್ಥಿಕ ಹಿನ್ನಡೆ ಮುಚ್ಚಿಕೊಳ್ಳುವ ಪ್ರಯತ್ನ ಇರುವುದು ಕಂಡು ಬರುತ್ತದೆ. ಗಲಾಟೆ, ಗಲಭೆ ಸೃಷ್ಟಿಸಿ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮಂಗಳೂರು ಹಿಂಸಾಚಾರ ಘಟನೆಯಲ್ಲಿ ಪೊಲೀಸರಿಂದ ಫೈರ್ ಆದಾಗ ಡಿ. 20, 22ರಂದು ಮುಖ್ಯಮಂತ್ರಿಗಳು ಹೋಗುತ್ತಾರೆ. ಅಧಿಕಾರಿಗಳಿಂದಲೂ ಬ್ರೀಫಿಂಗ್ ಆಗುತ್ತೆ. ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಘೋಷಣೆ ಆಗುತ್ತದೆ. ಆದರೆ, ಡಿ. 24ರಂದು ಗಲಾಟೆಯ ದೃಶ್ಯಗಳನ್ನು ಬಿಡುಗಡೆ ಮಾಡಿಸುತ್ತಾರೆ. ಬಳಿಕ 10 ಲಕ್ಷ ಪರಿಹಾರವನ್ನು ವಾಪಸ್ ಪಡೆಯುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಟೀಕಿಸಿದರು.