janadhvani

Kannada Online News Paper

ಶಾಸಕ ತನ್ವೀರ್ ಸೇಠ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಮೈಸೂರು,ನ.18: ಮಾಜಿ ಸಚಿವ,ಹಾಲಿ ಶಾಸಕ ತನ್ವೀರ್ ಸೇಠ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆದಿದೆ.ನಿನ್ನೆ ರಾತ್ರಿ ನಗರದ ಬನ್ನಿಮಂಟಪ ಆವರಣದಲ್ಲಿ ಸಂಬಂಧಿಗಳ ಬೀಗರ ಔತಣಕೂಟದಲ್ಲಿ ಸೇಠ್ ಭಾಗಿಯಾಗಿದ್ದ ವೇಳೆ ಅಪರಚಿತ ವ್ಯಕ್ತಿ ಏಕಾಏಕಿ ಅವರ ಮೇಲೆ ಡ್ಯಾಗರ್ನಿಂದ ಹಲ್ಲೆ ನಡೆಸಿದ್ದು, ಕತ್ತಿನ ಮೇಲ್ಭಾಗಕ್ಕೆ ಇರಿಯಲಾಗಿದೆ.

ಸದ್ಯ ತನ್ವೀರ್ ಸೇಠ್ ರನ್ನು ಕೊಲಂಬಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನ ಸ್ಥಳೀಯರು ಹಿಡಿದು ಎನ್.ಆರ್. ಠಾಣೆ ಪೊಲೀಸರಿಗೆ ಒಪ್ಪಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ಆರೋಪಿ, ಮೈಸೂರಿನ ಗೌಸಿಯಾನಗರದ ನಿವಾಸಿ ಫರ್ಹಾನ್ ಅಂತ ತಿಳಿದು ಬಂದಿದೆ. ನರಸಿಂಹರಾಜ ಕ್ಷೇತ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.