ದೆಹಲಿ: ಗಲ್ಫ್ಗೆ ತೆರಳುವ ವಿಮಾನ ಪ್ರಯಾಣ ದರ ಇಳಿಕೆಗೆ ಆಗ್ರಹಿಸಿ ಕೇರಳ ಅನಿವಾಸಿ ಅಸೋಸಿಯೇಷನ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ವಿಮಾನಯಾನ ಸಂಸ್ಥೆಗಳನ್ನು ನಿಯಂತ್ರಿಸಲು ಮತ್ತು ವಿಮಾನ ದರಕ್ಕೆ ಮಿತಿ ನಿಗದಿಪಡಿಸಬೇಕು ಎಂಬುದು ಅರ್ಜಿಯಲ್ಲಿನ ಬೇಡಿಕೆಯಾಗಿದೆ. ಭಾರತೀಯ ವಿಮಾನಯಾನ ಕಾಯ್ದೆಯ ನಿಯಮ-135 ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ, ಇದು ಟಿಕೆಟ್ ದರವನ್ನು ನಿಗದಿಪಡಿಸಲು ವಿಮಾನಯಾನ ಸಂಸ್ಥೆಗಳಿಗೆ ಅಧಿಕಾರ ನೀಡುತ್ತದೆ.
ಈ ನಿಯಮಗಳು ಅಸಂವಿಧಾನಿಕ ಮತ್ತು ನಾಗರಿಕರ ಪ್ರಯಾಣದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಗಲ್ಫ್ ಪ್ರಯಾಣಿಕರನ್ನು ಲೂಟಿ ಮಾಡುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸರ್ಕಾರ ಸಿದ್ಧವಿಲ್ಲದ ಕಾರಣ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವುದಾಗಿ ಕೇರಳ ಅನಿವಾಸಿ ಸಂಘ ತಿಳಿಸಿದೆ.
ನಿಯಮ 134 ರ ಉಪ-ನಿಯಮಗಳು (1) ಮತ್ತು (2) ರ ಪ್ರಕಾರ ಕಾರ್ಯನಿರ್ವಹಿಸುವ ಪ್ರತಿಯೊಂದು ವಾಯು ಸಾರಿಗೆ ಸಂಸ್ಥೆಯು ಕಾರ್ಯಾಚರಣೆಯ ವೆಚ್ಚ ಮತ್ತು ಸೇವೆಯ ಗುಣಲಕ್ಷಣಗಳನ್ನು ಒಳಗೊಂಡಂತೆ ಎಲ್ಲಾ ಅಂಶಗಳನ್ನು ಪರಿಗಣಿಸಿ ದರವನ್ನು ಸ್ಥಾಪಿಸುತ್ತದೆ.
ಆದರೆ, ದರ ನಿಗದಿಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿಗಳು ಅಥವಾ ಸ್ಪಷ್ಟತೆ ಇಲ್ಲದಿರುವುದರಿಂದ ಈ ಕಾಯಿದೆಯಡಿ ದರವನ್ನು ನಿಗದಿಪಡಿಸಲು ವಿಮಾನಯಾನ ಸಂಸ್ಥೆಗೆ ಅನಿಯಂತ್ರಿತ ಅಧಿಕಾರ ನೀಡಲಾಗಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.
ಗಲ್ಫ್ ದೇಶಗಳಲ್ಲಿನ ಬೇಸಿಗೆ ರಜೆಯ ಅವಧಿಯಾದ ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ವಿಮಾನ ದರವು ಗಗನಕ್ಕೇರುತ್ತಿದೆ.ವಿಮಾನದ ಇಂಧನದ ಬೆಲೆಯು ಹೆಚ್ಚಾದ ಕಾರಣದಿಂದ ವಿಮಾನಯಾನ ದರ ಹೆಚ್ಚಾಗಿದೆ ಎಂದು ಸಂಸ್ಥೆಗಳು ಹೇಳುತ್ತವೆ
ಕೇರಳ ಅನಿವಾಸಿ ಅಸೋಸಿಯೇಷನ್ ವಿಮಾನಯಾನ ಕಂಪನಿಗಳ ಕ್ರಮದ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಕೂಡ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಮಧ್ಯಪ್ರವೇಶಿಸಲಿಲ್ಲ. ಈ ವಿಚಾರದಲ್ಲಿ ಸರ್ಕಾರದ ಮಧ್ಯಪ್ರವೇಶವಿಲ್ಲದ ಪರಿಸ್ಥಿತಿಯಲ್ಲಿ ಸಂಘವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸಂಘದ ಪರವಾಗಿ ಚೇರ್ಮ್ಯಾನ್ ರಾಜೇಂದ್ರನ್ ವೆಲ್ಲಪಾಲತ್ ಮತ್ತು ಅಧ್ಯಕ್ಷೆ ಅಶ್ವನಿ ನಂಬಾರಂಬತ್ ಅರ್ಜಿದಾರರಾಗಿದ್ದು, ವಕೀಲರಾದ ಶ್ಯಾಮ್ ಮೋಹನ್ ಮತ್ತು ಕುರಿಯಾಕೋಸ್ ವರ್ಗೀಸ್ ಅವರು ಅರ್ಜಿ ಸಲ್ಲಿಸಿದ್ದಾರೆ.