janadhvani

Kannada Online News Paper

ಮುಸ್ಲಿಮ್ ಸೆಂಟ್ರಲ್ ಕಮಿಟಿ ನಿಲುವು ಸ್ವಾಗತಾರ್ಹ- ಎಸ್ಸೆಸ್ಸೆಫ್

ಪರಿಹಾರ ಘೋಷಣೆ, ಸಾಂತ್ವನ ಭೇಟಿಯಲ್ಲಿ ತಾರತಮ್ಯವೇಕೆ?- ಸಿಎಂ ಸ್ಪಷ್ಟಪಡಿಸಲಿ

ಶಿವಮೊಗ್ಗ :ಕರಾವಳಿ ಜಿಲ್ಲೆಯಲ್ಲಿ ಕೋಮುವೈಷಮ್ಯವು ಮತ್ತೆ ಕೊಲೆ ಸರಣಿಗೆ ಬಂದು ನಿಂತಿದೆ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿದ್ದರೂ ಓರ್ವರ ಮನೆಗೆ ಮಾತ್ರ ಭೇಟಿ ಕೊಟ್ಟು, ಪರಿಹಾರ ನೀಡುವ ಮೂಲಕ ಮುಖ್ಯಮಂತ್ರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆ.

ಆ ನಿಟ್ಟಿನಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ತಳೆದಿರುವ ನಿಲುವು ಸ್ವಾಗತಾರ್ಹವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸ‌ಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸರಕಾರವೇ ಬಹಿರಂಗವಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಬಹಿಷ್ಕರಿಸಿರುವುದನ್ನು ಪ್ರಜ್ಞಾವಂತ ನಾಗರಿಕ ಸಮಾಜ ಒಪ್ಪದು.
ಈ ರೀತಿ ಒಂದೇ ಮನೆಗೆ ಭೇಟಿ ನೀಡಿ ಉಳಿದವರನ್ನು ನಿರ್ಲಕ್ಷಿಸಲು ಕಾರಣವೇನೆಂದು ರಾಜ್ಯದ ಜನತೆಯ ಮುಂದೆ ರಾಜ್ಯದ ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು.

ಹಂತಕರನ್ನು ಬಂಧಿಸಬೇಕೆಂಬ ಒತ್ತಡಕ್ಕೊಳಗಾಗಿ ಪೊಲಿಸ್ ಇಲಾಖೆಯು ಅಮಾಯಕರನ್ನು ಬಂಧಿಸದಂತೆ ಸರಕಾರವು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯೊಬ್ಬರು ಒಂದು ನಿರ್ದಿಷ್ಟ ಸಮುದಾಯವನ್ನು ಮಾತ್ರ ತೃಪ್ತಿ ಪಡಿಸುವ ರೀತಿಯಲ್ಲಿ ಮನೆಗೆ ಭೇಟಿ ಹಾಗೂ ಪರಿಹಾರ ಧನ ನೀಡಿರುವುದರಲ್ಲಿ ಅಸಮಾಧಾನಗೊಂಡಿರುವ ಮಂಗಳೂರು ಸೆಂಟ್ರಲ್ ಕಮಿಟಿಯು, ಹತ್ಯೆಗೊಳಗಾದ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಸಹಾಯಧನ ನೀಡಲು ನಿರ್ಧರಿಸಿದೆ.