ಬೆಂಗಳೂರು: ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ನಡೆದ ‘ಶೌರ್ಯ ಪ್ರಶಿಕ್ಷಣ ವರ್ಗ’ದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ.
ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಹಿಂದೂ ಸಂಘಟನೆಗಳು ಮಕ್ಕಳನ್ನು ಟೆರೆರಿಸ್ಟ್ನ ಒಂದು ಗುಂಪುಗಳನ್ನಾಗಿ ತಯಾರು ಮಾಡುತ್ತಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ.
ಅರಕಲಗೂಡು ತಾಲೂಕಿನ ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಸ್ತ್ರಾಸ್ತ್ರ ತರಬೇತಿಯನ್ನು ಏರ್ ಗನ್ ಶಸ್ತ್ರಾಭ್ಯಾಸ ಅಂತಾ ಹೇಳಿದ್ದಾರೆ. ಯಾವ ದೃಷ್ಟಿಯಿಂದ ಇದರ ಅವಶ್ಯಕತೆ ಇದೆ. ಇದು ಎಲ್ಲೋ ಒಂದು ಕಡೆ ಸಮಾಜದ ಸಾಮರಸ್ಯ, ಭಾವೈಕ್ಯತೆಯನ್ನು ಹಾಳುಮಾಡುವ ವಾತಾವರಣ.
ಇಂದು ನಮಗೆ ಬೇಕಾಗಿರುವುದು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿಯಿಂದ ನಮ್ಮ ಹೋರಾಟ ಇರಬೇಕು, ಶಸ್ತ್ರದಿಂದ ಅಲ್ಲ. ದೇಶದ ಸಮಸ್ಯೆಗಳಿಗೆ ಪರಿಹಾರವನ್ನು ಶಾಂತಿಯಿಂದ ಹೋರಾಟ ಮಾಡಿ ಪಡೆಯಬೇಕು. ಕೈಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಗುಡುಗಿದ್ದಾರೆ.