janadhvani

Kannada Online News Paper

ಬಾಲಾಕೋಟ್ ದಾಳಿ: ಪಾರ್ಥೋ- ಅರ್ನಬ್ ಗೋಸ್ವಾಮಿ ವಾಟ್ಸ್ಆಪ್ ಚಾಟ್ ಕುರಿತು ತನಿಖೆಗೆ ಎನ್ ಸಿಪಿ ಆಗ್ರಹ

ಮುಂಬೈ: ಟೆಲಿವಿಷನ್ ರೇಟಿಂಗ್ಸ್ ಪಾಯಿಂಟ್ (ಟಿಆರ್‌ಪಿ) ಹಗರಣದ ಆರೋಪ ಹೊತ್ತಿರುವ ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಹಾಗೂ ರಿಪಬ್ಲಿಕ್ ಚಾನಲ್ ನ ಸ್ಥಾಪಕ ಅರ್ನಬ್ ಗೋಸ್ವಾಮಿ ಅವರ ನಡುವಿನ ವಾಟ್ಸ್ ಆಪ್ ಚಾಟ್ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಎನ್ ಸಿಪಿ ಆಗ್ರಹಿಸಿದೆ.

ಬಾಲಾಕೋಟ್ ವೈಮಾನಿಕ ದಾಳಿಗೂ ಮುನ್ನ ಇದಕ್ಕೆ ಹೋಲಿಕೆಯಾಗುವ ವಿಷಯವನ್ನು ವಾಟ್ಸ್ ಆಪ್ ಮೂಲಕ ಇಬ್ಬರೂ ಚರ್ಚಿಸಿದ್ದರು. ರಾಷ್ಟ್ರೀಯ ಭದ್ರತೆಯ ವಿಷಯಗಳನ್ನು ಟಿಆರ್ ಪಿಗಳಿಗಾಗಿ ಬಳಸಿಕೊಳ್ಳುವುದು ಅತ್ಯಂತ ಅಘಾತಕಾರಿ ಎಂದು ಎನ್ ಸಿಪಿ ವಕ್ತಾರ ಮಹೇಶ್ ತಪಾಸೆ ಹೇಳಿದ್ದಾರೆ.

ಚಾಟ್ ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸ್ಪಷ್ಟನೆ ಕೋರುವಂತೆ ಆಗ್ರಹಿಸಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಭೇಟಿ ಮಾಡುವುದಾಗಿ ಮಹೇಶ್ ತಪಾಸೆ ತಿಳಿಸಿದ್ದಾರೆ.

ಅರ್ನಬ್ ಗೋಸ್ವಾಮಿ ಅವರಿಗೆ ಈ ರೀತಿಯ ಸೂಕ್ಷ್ಮ ಮಾಹಿತಿ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಗೃಹ ಸಚಿವಾಲಯ ಈ ಮಾಹಿತಿ ಸೋರಿಕೆಯಾಗಿರುವ ಮೂಲವನ್ನು ಪತ್ತೆ ಹಚ್ಚಿ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಮಹೇಶ್ ತಾಪಸೆ ಆಗ್ರಹಿಸಿದ್ದಾರೆ.