janadhvani

Kannada Online News Paper

ಹಳೆಯಂಗಡಿ:ಟೆಂಪೋ ಡಿಕ್ಕಿ- ಗಾಯಾಳು ಮಹಿಳೆ ಸಾವು

ಮುಲ್ಕಿ,ಡಿ. 6: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಬಳಿ ಇಂದು ಬೆಳಿಗ್ಗೆ ಟೆಂಪೋ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

ಹಳೆಯಂಗಡಿ ಬಸ್ ನಿಲ್ದಾಣ ಬಳಿಯ ನಿವಾಸಿಗಳಾದ ತಾಯಿ ಸುಖಲತಾ(44) ಅವರ ಮಗ ಚಿರಾಗ್(10) ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟೆಂಪೋ ಹಳೆಯಂಗಡಿ ಸಮೀಪಿಸುತ್ತಿದಂತೆಯೇ ಚಾಲಕನ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ಡಿಕ್ಕಿ ಹೊಡೆದು ಬಳಿಕ ಟೆಂಪೋ ಡಿವೈಡರ್ ಮೇಲೇರಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿತ್ತು.

ಗಂಭೀರ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ ಸುಖಲತಾ (44) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಗ ಚಿರಾಗ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಅಪಘಾತದಿಂದ ಚಾಲಕ ಪವಾಡಸದೃಶ ಪಾರಾಗಿದ್ದ. ಮೃತ ಸುಖಲತಾ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಹಳೆಯಂಗಡಿಯಲ್ಲಿ ನೆಲೆಸಿದ್ದಾರೆ. ಮಗ ಚಿರಾಗ್ ಮುಲ್ಕಿ ವ್ಯಾಸ ಮಹರ್ಷಿ ಶಾಲೆಯ ವಿದ್ಯಾರ್ಥಿ. ಮೃತ ಮಹಿಳೆಯ ಪತಿ ಕಾಪುವಿನಲ್ಲಿ ನೆಲೆಸಿದ್ದು, ಮನೆಯವರ ರೋದನ ಮುಗಿಲು ಮುಟ್ಟಿದೆ. ತಾಯಿಗೆ ಅನಾರೋಗ್ಯದ ನಿಮಿತ್ತ ಹಳೆಯಂಗಡಿಯಲ್ಲಿ ಸುಖಲತಾ ನೆಲೆಸಿದ್ದರು. ಸುರತ್ಕಲ್ ಟ್ರಾಫಿಕ್ ಪೊಲೀಸರು ಟೆಂಪೋ ಚಾಲಕನನ್ನು ಬಂಧಿಸಿದ್ದಾರೆ.