janadhvani

Kannada Online News Paper

‘ಹಾರ್ಮುಝ್’ ನಿಯಂತ್ರಣ ಮುಂದುವರಿಕೆ, ಹುತಾತ್ಮರ ರಕ್ತಕ್ಕೆ ಪ್ರತಿಕಾರ ತೀರಿಸುವೆವು- ಮೊದಲ ಸಂದೇಶದಲ್ಲಿ ಮುಜ್ತಬಾ ಖಾಮ್ನಇ

ಈ ಪ್ರದೇಶದಲ್ಲಿನ ಎಲ್ಲಾ ಯುಎಸ್ ಮಿಲಿಟರಿ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು, ಇಲ್ಲದಿದ್ದರೆ ದಾಳಿಗಳು ಮುಂದುವರಿಯಲಿವೆ ಎಂದು ಮುಜ್ತಬಾ ಎಚ್ಚರಿಸಿದ್ದಾರೆ.

ಟೆಹ್ರಾನ್: ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಮುಂದುವರಿಯಲಿದೆ ಮತ್ತು ಹುತಾತ್ಮರ ರಕ್ತಕ್ಕೆ ಪ್ರತಿಕಾರ ತೀರಿಸಲಾಗುವುದು ಎಂದು ಇರಾನ್‌ನ ನೂತನ ಪರಮೋನ್ನತ ನಾಯಕ ಮುಜ್ತಬಾ ಖಾಮ್ನಈ ಘೋಷಿಸಿದ್ದಾರೆ. ಪರಮೋನ್ನತ ಅಧಿಕಾರ ವಹಿಸಿಕೊಂಡ ನಂತರ ದೇಶದ ಜನತೆಯನ್ನು ಉದ್ದೇಶಿಸಿ ನೀಡಿದ ಮೊದಲ ಸಂದೇಶದಲ್ಲಿ ಮುಜ್ತಬಾ ಈ ನಿಲುವು ವ್ಯಕ್ತಪಡಿಸಿದ್ದಾರೆ.

ಇರಾನ್ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸ್ನೇಹವನ್ನು ನಂಬುತ್ತದೆ. ನಾವು ಈ ಪ್ರದೇಶದಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಮತ್ತು ಅದು ಮುಂದುವರಿಯುತ್ತದೆ. ಈ ಪ್ರದೇಶದಲ್ಲಿನ ಎಲ್ಲಾ ಯುಎಸ್ ಮಿಲಿಟರಿ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು, ಇಲ್ಲದಿದ್ದರೆ ದಾಳಿಗಳು ಮುಂದುವರಿಯಲಿವೆ ಎಂದು ಮುಜ್ತಬಾ ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಇರಾನ್ ಸೈನ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. “ನಮ್ಮ ದೇಶವು ಒತ್ತಡ ಮತ್ತು ದಾಳಿಗೆ ಒಳಗಾಗಿರುವ ಈ ಸಮಯದಲ್ಲಿ ಧೈರ್ಯದಿಂದ ಹೋರಾಡುತ್ತಿರುವ ಸೈನಿಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ಹೇಳಿದರು. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಮತ್ತು ಹಾನಿಗೊಳಗಾದವರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ ಅವರು, ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸುವ ಅಗತ್ಯವಿದೆ ಎಂದರು.

ಮುಜ್ತಬಾ ಅವರ ಈ ಸಂದೇಶವನ್ನು ಟೆಲಿವಿಷನ್ ನಿರೂಪಕಿ ಓದಿದರು. ಯುಎಸ್-ಇಸ್ರೇಲ್ ದಾಳಿಯಲ್ಲಿ ಮುಜ್ತಬಾ ಗಾಯಗೊಂಡಿದ್ದಾರೆ ಎಂಬ ವರದಿಗಳು ಈ ಹಿಂದೆ ಕೇಳಿಬಂದಿದ್ದವು. ಫೆಬ್ರವರಿ 28 ರಂದು ನಡೆದ ಯುಎಸ್-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಆಯತೊಲ್ಲಾ ಅಲಿ ಖಾಮ್ನಈ ಅವರು ಮೃತಪಟ್ಟ ನಂತರ, ಅವರ ಪುತ್ರ ಮುಜ್ತಬಾ ಅವರನ್ನು ನೂತನ ಪರಮೋನ್ನತ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಅಲಿ ಖಾಮ್ನಈ ಅವರ ಎರಡನೇ ಪುತ್ರನಾಗಿರುವ ಮುಜ್ತಬಾ ಖಾಮ್ನಈ, ದೀರ್ಘಕಾಲದಿಂದ ಇರಾನ್‌ನ ರಾಜಕೀಯ ಮತ್ತು ಮಿಲಿಟರಿ ವಲಯಗಳಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.