ಸೌದಿ ಅರೇಬಿಯಾ:ಇಲ್ಲಿನ ಪೂರ್ವ ಪ್ರಾಂತ್ಯದಲ್ಲಿರುವ ನಈರಿಯ್ಯಾದಲ್ಲಿ ಕಳೆದ 20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಹೈದರಬಾದ್ ನಿವಾಸಿ ಮುಹಮ್ಮದ್ ಜಹಾಂಗೀರ್ ಶೈಖ್ ಎಂಬುವವರು ಜುಲೈ 17 ರಂದು ಹೃದಯಾಘಾತದಿಂದ ನಿಧನರಾಗಿದ್ದರು.
ಕುಟುಂಬದ ಕೋರಿಕೆ ಮೇರೆಗೆ ಮೃತದೇಹವನ್ನು ಊರಿಗೆ ಕಳುಹಿಸಲು ಹಾಗೂ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲು ಕೂಡಲೇ ಸ್ಪಂದಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸಾಂತ್ವನ ವಿಭಾಗದ ಕಾರ್ಯಕರ್ತರು, ದಾಖಲೆ ಪತ್ರ ಹಾಗು ಭಾರತೀಯ ರಾಯಭಾರಿ ಕಛೇರಿಗೆ ಸಂಬಂಧಿಸಿದಂತೆ ಇನ್ನಿತರ ವ್ಯವಸ್ಥೆಗಳನ್ನು ಸರಿಪಡಿಸಿ, ಜುಲೈ 22 ರಂದು ಮೃತದೇಹವನ್ನು ಊರಿಗೆ ಕಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಿಧನರಾಗುವ ಅನಿವಾಸಿಗಳ ಮೃತದೇಹವನ್ನು ಇಲ್ಲಿ ದಫನ ಮಾಡುವುದು ಅಥವಾ ಊರಿಗೆ ಕೊಂಡೊಯ್ಯುವುದಿದ್ದರೆ ವಲಸೆ ನೀತಿಗೆ ಸಂಬಂಧಿಸಿದ ಹಲವಾರು ದಾಖಲೆ ಪತ್ರಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಧೂತವಾಸ ಕೇಂದ್ರ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಸಿಗಬೇಕಾದ ದಾಖಲೆಗಳನ್ನು ಸರಿಪಡಿಸಲು ಕೆಸಿಎಫ್ ದಮ್ಮಾಮ್ ನಾರ್ತ್ ಸೆಕ್ಟರ್ ಸಾಂತ್ವನ ನಾಯಕರಾದ ಫಾರೂಕ್ ಕಾಪು ಹಾಗೂ ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಬಾಷಾ ಗಂಗಾವಳಿ ಮುಂತಾದವರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಇದಕ್ಕಾಗಿ ಶ್ರಮಿಸಿದರ ಫಲವಾಗಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮೃತದೇಹವನ್ನು ಊರಿಗೆ ಕಳುಹಿಸಲು ಸಾಧ್ಯವಾಗಿದೆ.