janadhvani

Kannada Online News Paper

ತ್ರಿವರ್ಣ ಧ್ವಜಕ್ಕೆ ಅವಮಾನ- ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಮೊಕದ್ದಮೆಗೆ ಆಗ್ರಹ  

ಮುಂದೆ ಕೆಂಪು ಕೋಟೆ ಮೇಲೆ ಕೇಸರಿ ಧ್ವಜಹಾರಿಸುವುದಾಗಿ ಹೇಳಿಕೆ ನೀಡಿದ್ದರು.

ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಅಲ್ಲದೆ ಹಲವು ಸಂಘಪರಿವಾರದ ನಾಯಕರು ರಾಷ್ಟ್ರ ಧ್ವಜಕ್ಕೆ ಅಪಮಾನದ ಹೇಳಿಕೆ ನೀಡುತ್ತಿದ್ದಾರೆ. ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಅವರ ಹಿಡನ್ ಅಜೆಂಡಾ ಇದೇ ಆಗಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಬೇಕು. ಸದನದಲ್ಲಿ ನಿಲುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ಕೇಳುತ್ತೇವೆ. ಈ ಬಗ್ಗೆ ಈಗಾಗಲೇ ಸಭಾಪತಿಗಳನ್ನ ಕೇಳಿಕೊಂಡಿದ್ದೇವೆ ಎಂದರು.

ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಬಂಧ ಗೊಂದಲ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಇದೊಂದು ಷಡ್ಯಂತ್ರ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ ಎಂದು ಕಿಡಿಕಾರಿದರು. ಸಂಘ ಪರಿವಾರದವರ ಮಾತನ್ನು ಕೇಳಿಕೊಂಡು ಮಕ್ಕಳ ಪ್ರವೇಶ ತಡೆಯಬಾರದೆಂಬುದು ನಮ್ಮ ಆಗ್ರಹ. ವಿದ್ಯಾರ್ಥಿಗಳ ಪ್ರವೇಶಕ್ಕೆ ಅಡ್ಡಿಪಡಿಸಬಾರದೆಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರನ್ನೂ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು.

ಈಶ್ವರಪ್ಪ ಹೇಳಿದ್ದೇನು?

ಲೋಡ್‌ಗಟ್ಟಲೆ ಕೇಸರಿ ಶಾಲನ್ನು ಬಿಜೆಪಿಯವರು ಕಳಿಸಿದ್ದಾರೆ ಅನ್ನೋ ಡಿ.ಕೆ ಶಿವಕುಮಾರ್ ಆರೋಪ ವಿಚಾರವಾಗಿ ಮಾತನಾಡಿ,
ಕೇಸರಿ ಶಾಲು ಕೊಟ್ಟರೆ ಏನು ತಪ್ಪು.? ಎಂದು ಪ್ರಶ್ನಿಸಿದರು. ಕೇಸರಿ ಶಾಲು ಹಂಚಿರುವುದರಲ್ಲಿ ತಪ್ಪೇನಿಲ್ಲ. 

ಭವಿಷ್ಯದಲ್ಲಿ ಭಗವದ್ಗಜವೇ ರಾಷ್ಟ್ರ ಧ್ವಜವಾಗಬಹುದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕೇಸರಿ ಶಾಲನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದ್ರೂ ಹಾರಿಸ್ತೇವೆ. ಮುಂದೆ ಕೆಂಪು ಕೋಟೆ ಮೇಲೆ ಕೇಸರಿ ಧ್ವಜಹಾರಿಸುವುದಾಗಿ ಹೇಳಿಕೆ ನೀಡಿದ್ದರು.