✍️ ಎಂ ಹೆಚ್ ಹಸನ್ ಝುಹ್’ರಿ, ಮಂಗಳಪೇಟೆ
mh.hasanzuhri@gmail.com
ಮಂಗಳಪೇಟೆ! ಈ ಹೆಸರು ಕೇಳದವರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಂತೆ ಹೊರ ಜಿಲ್ಲೆಯಲ್ಲಿಯೂ ಚಿರಪರಿಚಿತ ಗೊಂಡ ಹೆಸರಿದು. ಅದಕ್ಕೆ ಕಾರಣ ಇಲ್ಲಿಯ ಪುರಾತನ ಮಸೀದಿ. ಸರಿ ಸುಮಾರು ನೂರು,ನೂರೈವತ್ತು ವರ್ಷಕ್ಕಿಂತಲೂ ಹೆಚ್ಚು ಇತಿಹಾಸವಿರುವ ಮಂಗಳಪೇಟೆ ಮುಹ್ಯಿದ್ದೀನ್ ಜುಮುಅ: ಮಸ್ಜಿದ್ ಬಡವರ ,ನಿರ್ಗತಿಕರ, ರೋಗಿಗಳ,ಅಸಹಾಯಕರ,ದು:ಖಿತರ,ಮನನೊಂದವರ, ಹತಾಶೆಗೊಂಡವರ, ಜೀವನದಲ್ಲಿ ಸೋಲನುಭವಿಸಿದವರ ಪಾಲಿಗೆ ಆಶಾ ಕಿರಣ ವಾಗಿದೆ.
ಹಿಂದಿನ ಕಾಲದಿಂದಲೂ ಜನರು ಮನಶಾಂತಿಗಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಮಂಗಳಪೇಟೆ ಮಸೀದಿಗೆ ಹರಕೆ ಮಾಡುತ್ತಿದ್ದರು. ಆ ಸಂಪ್ರದಾಯ ಇಂದೂ ಮುಂದುವರಿದಿದೆ. ಜಾತಿ,ಧರ್ಮ, ಪಥ,ಪಂಗಡಗಳಿಲ್ಲದೆ ಸರ್ವ ಧರ್ಮೀಯರು ಮಂಗಳಪೇಟೆ ಮಸೀದಿಗೆ ಹರಕೆ ಹೊತ್ತು ಬರುವುದನ್ನು ಕಾಣಬಹುದು. ಎಷ್ಟೇ ದೊಡ್ಡ ಸಮಸ್ಯೆ ಇರಲಿ,ಮಂಗಳಪೇಟೆ ಮಸೀದಿಗೆ ಹರಕೆ ಮಾಡಿದರೆ ಅದು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.ಹೀಗೆ ಸಾವಿರಾರು ಮಂದಿ ಸಮಸ್ಯೆ ಬಗೆ ಹರಿಸಿಕೊಂಡಿದ್ದಾರೆ.
“ಈ ಸಮಸ್ಯೆಗೆ ಪರಿಹಾರ ಇಲ್ಲವೇ..?” ಎಂದು ಹತಾಶೆ ಗೊಂಡವರು ಮಂಗಳಪೇಟೆ ಮಸೀದಿಯ ಕಾರಣದಿಂದ ಮನಶಾಂತಿ ಲಭಿಸಿದ ನೂರಾರು ಘಟನೆಗಳು ನಮ್ಮೆದುರಿಗಿದೆ. ಜೀವನದಲ್ಲಿ ಜಿಗುಪ್ಸೆ ಗೊಂಡು,ಸಮಸ್ಯೆಗಳನ್ನು ಮೆತ್ತಿಕೊಂಡು ಆಸರೆ ಗಾಗಿ ಮಂಗಳಪೇಟೆ ಮಸೀದಿಯತ್ತ ಬಂದವರು ಯಾರೂ ಬರಿಗೈಯಲ್ಲಿ ಮರಳಿ ಹೋದದ್ದಿಲ್ಲ. ಅವರ ಮುಖದಲ್ಲಿ ಸಾಂತ್ವನದ,ತೃಪ್ತಿಯ ನಗೆಯಿಂದಲ್ಲದೆ….ಮಕ್ಕಳಿಲ್ಲದವರು, ವಾಸಿಯಾಗದ ರೋಗಿಗಳು,ದುಡಿಮೆ ಇಲ್ಲದೆ ವ್ಯಥೆ ಪಡುವವರು, ಸಂಕಷ್ಟಕ್ಕೆ ಸಿಲುಕಿದವರು, ಮದುವೆ ಪ್ರಾಯಕ್ಕೆ ತಲುಪಿದ ಹೆಣ್ಣು ಮಕ್ಕಳ ಕಾರಣದಿಂದ ನೋವಾನುಭವಿಸುವವರು, ಸಾಲದಿಂದ ನೊಂದವರು, ವಿದೇಶದಲ್ಲಿ ಸಂಕಷ್ಟಕ್ಕೊಳಗಾದವರು, ಜೀವನದಲ್ಲಿ ಭರವಸೆ ಕಳಕೊಂಡವರು ಹೀಗೆ ಒಂದಲ್ಲ , ಎರಡಲ್ಲ… ನೂರಾರು ಜನ ಸಾಂತ್ವನಕ್ಕಾಗಿ,ಪರಿಹಾರಕ್ಕಾಗಿ ಮಂಗಳಪೇಟೆಯ ಮಸ್ಜಿದ್ಗೆ ಹರಕೆ ಹೊತ್ತು ತನ್ನ ಉದ್ದೇಶವನ್ನು ಈಡೇರಿಸಿಕೊಂಡಿದ್ದಾರೆ.
ವಿವಿಧ ಊರುಗಳಿಂದ ಜನರು ಮಂಗಳಪೇಟೆ ಮಸೀದಿಯನ್ನು ಹುಡುಕಿ ಬಂದು ಹರಕೆ ನೀಡಿ ತಮ್ಮ ಉದ್ದೇಶ ಈಡೇರಿಸಿದ ತೃಪ್ತಿ ಮತ್ತು ಸಂತೋಷದಿಂದ ಹೋಗುವುದು ಕಾಣಬಹುದು. ಯಾವ ಉದ್ದೇಶ ವಿಟ್ಟು ಇಲ್ಲಿ ಹರಕೆ ನೀಡಿದರೂ ಆ ಉದ್ದೇಶ ಈಡೇರುವುದು ಮಂಗಳಪೇಟೆ ಮಸ್ಜಿದ್ಗಿರುವ ಪ್ರತ್ಯೇಕತೆಯಾಗಿದೆ.
ಇಲ್ಲಿ ಪ್ರತೀ ಶುಕ್ರವಾರ ರಾತ್ರಿ ಸ್ವಲಾತ್ ಮಜ್ಲಿಸ್ ನಡೆಯುತ್ತಿದೆ.1992 ರ ಇಸವಿಯಲ್ಲಿ ಆರಂಭಗೊಂಡ ಸ್ವಲಾತ್ ಮಜ್ಲಿಸ್ಗೆ ಇದೀಗ 34 ವರ್ಷ ತುಂಬುತ್ತಿದೆ.ಇದೇ ಬರುವ ಪೆಬ್ರವರಿ 13 ಮತ್ತು 14 ರಂದು ಸ್ವಲಾತ್ ವಾರ್ಷಿಕವು ಜಮಾಅತ್ ಅಧ್ಯಕ್ಷರಾದ ಸಿ ಅಬ್ದುಲ್ ಹಮೀದ್ರವರ ನೇತೃತ್ವದಲ್ಲಿ ನಡೆಯಲಿದೆ. ಮೊದಲ ದಿನದಂದು ಕೇರಳದ ಹೆಸರಾಂತ ಗಾಯಕ ಶುಕೂರ್ ಇರ್ಪಾನಿ ಮತ್ತು ಬಳಗ ದಿಂದ ಬುರ್ದಾ ಮಜ್ಲಿಸ್ ಹಾಗೂ ಎರಡನೇ ದಿನದಂದು ಬೃಹತ್ ಸ್ವಲಾತ್ ವಾರ್ಷಿಕವು ನಡೆಯಲಿದೆ. ಸ್ವಲಾತ್ ಮಜ್ಲಿಸ್ನ ನೇತೃತ್ವವನ್ನು ಸಯ್ಯಿದ್ ಶಹೀದುದ್ದೀನ್ ತಂಙಳ್ ಅಲ್ ಬುಖಾರಿ ಶಿವಮೊಗ್ಗ ವಹಿಸಲಿದ್ದಾರೆ. ಮುಕ್ಕಾ ಮುದರ್ರಿಸ್ ಮನ್ಸೂರ್ ಮದನಿ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ. ಪ್ರತೀ ವರ್ಷವೂ ಸ್ವಲಾತ್ ಮಜ್ಲಿಸ್ನ ವಾರ್ಷಿಕೋತ್ಸವವು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ವಾರ್ಷಿಕ ಸ್ವಲಾತ್ ಮಜ್ಲಿಸ್ ಮಂಗಳಪೇಟೆಯ ಜನರಿಗೆ ಮಾತ್ರವಲ್ಲ, ಆಸುಪಾಸಿನ ಊರಿನವರಿಗೂ ಒಂದು ಹಬ್ಬದ ಸಂಭ್ರಮವಾಗಿದೆ.ಉರೂಸ್ಗೆ ಜನರು ಹರಿದು ಬರುವಂತೆ ಮಂಗಳಪೇಟೆ ಸ್ವಲಾತ್ ವಾರ್ಷಿಕಕ್ಕೂ ಜನರು ಹರಿದು ಬರುವುದು ಕಾಣಬಹುದು. ನಮ್ಮೂರಿಗೆ ಇದೊಂದು ನಾಡ ಹಬ್ಬವಾಗಿ ಮಾರ್ಪಟ್ಟಿದೆ.


