ಕೋಝಿಕ್ಕೋಡ್ |ಇತರ ಧರ್ಮೀಯರ ಸಂಭ್ರಮಾಚರಣೆಯಲ್ಲಿ ಸೌಹಾರ್ದ ಹಂಚುವುದಕ್ಕೂ ಅವರ ಧಾರ್ಮಿಕ ಸಂಸ್ಕೃತಿಯನ್ನು ಅಳವಡಿಸುವುದಕ್ಕೂ ವ್ಯತ್ಯಾಸವಿದೆ ಎಂದು ಸಮಸ್ತ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಇತರ ಸಮುದಾಯಗಳ ನಡುವೆ ಸೌಹಾರ್ದದ ಅವಶ್ಯಕತೆ ಇದೆ ಎಂಬುದರಲ್ಲಿ ಸಂದೇಹವಿಲ್ಲ.ಆದರೆ, ಇತರ ಸಮುದಾಯಗಳ ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಅಗಲಿದ ಮಂಬುರುಮ್ ತಂಙಳ್, ಉಮರ್ ಖಾಝಿಯಂತಹ ಮಹಾನ್ ನಾಯಕರು, ಅನ್ಯ ಧರ್ಮೀಯರೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ಬಾಳಿದ್ದಾರೆ ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಕೋಝಿಕ್ಕೋಡ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಕಾಂತಪುರಂ ಉತ್ತರಿಸಿದರು.
ರಾಮ ಮಂದಿರ ಉದ್ಘಾಟನೆಯಲ್ಲಿ ಕಾಂಗ್ರೆಸ್ ಪಾಲ್ಗೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ಕಾಂಗ್ರೆಸ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಂತಪುರಂ ಹೇಳಿದರು. ಅವರಲ್ಲಿ ಸಮರ್ಥವಾಗಿ ಉತ್ತರಿಸುವ ನಾಯಕರೂ ಇದ್ದಾರೆ.
ಕರೆದಿರುವ ಪತ್ರಿಕಾಗೋಷ್ಠಿ ಸಮಸ್ತದ 100ನೇ ವರ್ಷಾಚರಣೆಗೆ ಸಂಬಂಧಿಸಿದ್ದು ಎಂದ ಅವರು, ಸಮಸ್ತದ 100 ನೇ ವಾರ್ಷಿಕೋತ್ಸವವನ್ನು ಇಕೆ ವಿಭಾಗ ಆಚರಿಸುವ ಬಗ್ಗೆ ಯಾವುದೇ ತರ್ಕಕ್ಕೆ ಇಲ್ಲ ಎಂದು ಕಾಂತಪುರಂ ಹೇಳಿದ್ದಾರೆ. ನಾನು ಸುಮಾರು ಐವತ್ತು ವರ್ಷಗಳಿಂದ ಸಮಸ್ತದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. 1974 ರಿಂದ, ಮುಶಾವರ ಸದಸ್ಯನಾಗಿ ಮತ್ತು ನಂತರ ಜೊತೆ.ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಗೈದಿದ್ದೇನೆ.ಸಮಸ್ತದ 60ನೇ ವಾರ್ಷಿಕ ಸಮ್ಮೇಳನದಲ್ಲಿ ಸ್ವಾಗತ ಭಾಷಣವನ್ನೂ ಮಾಡಿದ್ದೇನೆ. ಈಗ,ಅದನ್ನೇ ಮುಂದುವರಿಸುತ್ತಿದ್ದೇನೆ.
100ನೇ ವರ್ಷಾಚರಣೆಯನ್ನು ಆಚರಿಸುವ ಹಕ್ಕು ಯಾರಿಗೆ ಇದೆ ಎಂಬಿತ್ಯಾದಿ ವಿಚಾರಗಳನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ವಾರ್ಷಿಕೋತ್ಸವ ಆಚರಣೆಗಳು ಸುನ್ನಿ ಐಕ್ಯತೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ. ಐಕ್ಯತೆಗಾಗಿ ಸದಾ ಶ್ರಮಿಸುತ್ತಿದ್ದೇವೆ ಎಂದು ಕಾಂತಪುರಂ ಹೇಳಿದರು.
‘ದಾರಿ ತಪ್ಪಿಸುವ ವರದಿಗಳಿಗೆ ಮರುಳಾಗಬೇಡಿ’
ಅನ್ಯ ಧರ್ಮೀಯರ ಸಂಭ್ರಮಾಚರಣೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸುವ ಕುರಿತು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಮಾತುಗಳನ್ನು ನಿಖರವಾಗಿ ವರದಿ ಮಾಡುವ ಬದಲು ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ತಪ್ಪು ದಾರಿಗೆ ಎಳೆಯುವ ವರದಿಗಳಿಗೆ ಮರುಳಾಗಬೇಡಿ ಎಂದು ಸಮಸ್ತ ಕಚೇರಿ ತಿಳಿಸಿದೆ.
ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಮತ್ತು ಸ್ನೇಹವನ್ನು ಹಂಚಿಕೊಳ್ಳುವುದು ವಿಭಿನ್ನವಾಗಿದೆ. ಮುಸ್ಲಿಮರು ತಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಾರೆ ಮತ್ತು ಇತರ ಧಾರ್ಮಿಕ ಸಂಸ್ಕೃತಿಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಹಿಂದಿನಂತೆ ಸೌಹಾರ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು ಎಂಬುದು ಸಮಸ್ತದ ನಿಲುವು ಎಂದು ಸಮಸ್ತ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.