ಚಂಡೀಗಢ: ಪಂಜಾಬ್ ನಲ್ಲಿ ನೂತನವಾಗಿ ಅಧಿಕಾರಕ್ಕೇರಿದ ಭಗವಂತ್ ಸಿಂಗ್ ಮಾನ್ ನೇತೃತ್ವದ ಸರ್ಕಾರ, ಜುಲೈ 1ರಿಂದ ಗೃಹ ಬಳಕೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಶನಿವಾರ (ಏಪ್ರಿಲ್ 16) ಘೋಷಿಸಿದೆ. ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೇರಿ ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ. ಪಂಜಾಬ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಿತ್ತು. ಇದು ಪಂಜಾಬ್ ನ ಆಪ್ ಸರ್ಕಾರದ ಒಂದು ತಿಂಗಳ ರಿಪೋರ್ಟ್ ಕಾರ್ಡ್ ಗೆ ಸಂಬಂಧಿಸಿದ ಘೋಷಣೆಯಾಗಿದೆ ಎಂದು ವರದಿ ತಿಳಿಸಿದೆ.
ಪರಿಶಿಷ್ಟ ಜಾತಿಗಳು, ಹಿಂದುಳಿದ ಜಾತಿಗಳು, ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಾಗೂ ಸ್ವಾತಂತ್ರ ಯೋಧರು ಪ್ರಸಕ್ತ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಪಡೆಯುತ್ತಿದ್ದು, ಇನ್ನು ಮುಂದೆ ಅವರು ತಮ್ಮ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಪಡೆಯಲಿದ್ದಾರೆ. ಈ ಕುಟುಂಬಗಳ ವಿದ್ಯುತ್ ಬಳಕೆಯು ಎರಡು ತಿಂಗಳುಗಳಲ್ಲಿ 600 ಯೂನಿಟ್ ಗಿಂತ ಅಧಿಕವಾದಲ್ಲಿ , ಆಗ ಅವರಿಗೆ ಮಿತಿಯನ್ನು ಮೀರಿದ ಯೂನಿಟ್ ಗಳಿಗೆ ಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಮಾನ್ ತಿಳಿಸಿದ್ದಾರೆ.
ಆದರೆ ಇತರ ಕುಟುಂಬಗಳ ವಿದ್ಯುತ್ ಬಳಕೆಯು ಎರಡು ತಿಂಗಳುಗಳಲ್ಲಿ 600 ಯೂನಿಟ್ ಗಿಂತ ಅಧಿಕವಾಗಿದ್ದಲ್ಲಿ ಆಗ ಗ್ರಾಹಕರು ಒಟ್ಟು ವಿದ್ಯುತ್ ಬಳಕೆಯ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಿಂತಲೂ ಹೆಚ್ಚಾಗಿ, ಒಂದು ವೇಳೆ ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರ ವಿದ್ಯುತ್ ಶುಲ್ಕದಲ್ಲಿಯೂ ಯಾವುದೇ ಹೆಚ್ಚಳ ಇರುವುದಿಲ್ಲ ಮತ್ತು ರೈತ ಸಮುದಾಯಕ್ಕೆ ಕೃಷಿ ಕಾರ್ಯಗಳಿಗಾಗಿ ಉಚಿತ ವಿದ್ಯುತ್ ಪೂರೈಕೆ ಮುಂದುವರಿಯಲಿದೆ ಎಂದರು.
ಈ ಘೋಷಣೆಗೂ ಮುನ್ನ ಏಪ್ರಿಲ್ 11ರಂದು ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.ಪಂಜಾಬ್ ನಲ್ಲಿ ಗೃಹ ಬಳಕೆಗೆ 300 ಯೂನಿಟ್ಸ್ ಉಚಿತ ವಿದ್ಯುತ್ ನೀಡುವ ಬಗ್ಗೆ ಭಗವಂತ್ ಮಾನ್ ಪಂಜಾಬ್ ನ ವಿದ್ಯುತ್ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿರುವುದಾಗಿ ವರದಿ ವಿವರಿಸಿದೆ.
ಪಂಜಾಬ್ ನಲ್ಲಿಯೂ ದೆಹಲಿ ಮಾದರಿ ಆಡಳಿತ ನಡೆಸುವುದಾಗಿ ಆಮ್ ಆದ್ಮಿ ಪಕ್ಷ 2022ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿತ್ತು. ಒಂದು ವೇಳೆ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಿದರೆ ಪ್ರತಿ ತಿಂಗಳು 300 ಯೂನಿಟ್ಸ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಆಪ್ ಭರವಸೆ ನೀಡಿತ್ತು.ರಾಜ್ಯದಲ್ಲಿ ಪ್ರತಿಯೊಂದು ಕುಟುಂಬಕ್ಕೂ 300 ಯೂನಿಟ್ ಉಚಿತ ವಿದ್ಯುತ್ತನ್ನು ಒದಗಿಸುವ ಪಂಜಾಬ್ ಸರಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಆರವಿಂದ್ ಕೇಜ್ರಿವಾಲ್ ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ. ಇತರ ರಾಜಕೀಯ ಪಕ್ಷಗಳ ಹಾಗೆ ಎಎಪಿಯು ಸುಳ್ಲು ಭರವಸೆಗಳಲ್ಲಿ ನೀಡುವುದಿಲ್ಲವೆಂದವರು ಹೇಳಿದ್ದಾರೆ.
ಇದರ ಬೆನ್ನಲ್ಲೇ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಿಸುವುದರ ಮೇಲೆ ಕಡಿವಾಣ ಹಾಕಿದ್ದ ಸಿಎಂ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದರು. ಇದರ ಜೊತೆಗೆ ತಾವು ಗುರುತು ಮಾಡಿರುವ ಅಂಗಡಿಯಿಂದಲೇ ಪುಸ್ತಕ ಮತ್ತು ಸಮವಸ್ತ್ರ ಖರೀದಿ ಮಾಡುವಂತೆ ಸೂಚನೆ ನೀಡಬಾರದು ಎಂದು ತಿಳಿಸಿದ್ದಾರೆ.
ಮಕ್ಕಳ ಪೋಷಕರು ತಮ್ಮ ಇಚ್ಛೆಯಂತೆ ಸಮವಸ್ತ್ರ ಹಾಗೂ ಪುಸ್ತಕ ಖರೀದಿ ಮಾಡಲು ಅವಕಾಶ ನೀಡುವಂತೆಯೂ ಪ್ರಕಟಣೆ ಹೊರಡಿಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ಫಲಿತಾಂಶ ಬಹಿರಂಗಗೊಂಡಿದೆ. ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ, ಅಧಿಕಾರದ ಚುಕ್ಕಾಣಿ ಹಿಡಿದಿದೆ.







