ದೇರಳಕಟ್ಟೆ: ( ಫೆ 26 ) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಪಕ್ಷದ ಕೈರಂಗಳ ಗ್ರಾಮ ಸಮಿತಿಯ ನೂತನ ಕಚೇರಿಯನ್ನು ಮೊಂಟುಗೋಳಿ ಪದಿಂಜಾರ್ ನಲ್ಲಿ ಎಸ್.ಡಿ.ಪಿ.ಐ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಉದ್ಘಾಟಿಸಿದರು.
ಆ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ವಹಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆಸಿ ರೋಡ್ ಎಸ್ಡಿಪಿಐ ಪಕ್ಷ ಈ ದೇಶದ ದಲಿತ, ದಮನಿತ, ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸುತ್ತಿರುವ ಒಂದು ಸಾಮಾಜಿಕ ಚಳುವಳಿಯಾಗಿದೆ. ಇಂದು ದೇಶದಲ್ಲಿ ತಾಂಡವಾಡುತ್ತಿರುವ ಕೋಮುವಾದವನ್ನು ಎದುರಿಸುವಲ್ಲಿ ಎಸ್ಡಿಪಿಐ ಮುಂಚೂಣಿಯಲ್ಲಿದ್ದು ಪಕ್ಷ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ ಎಂದರು.
ಕ್ಷೇತ್ರ ಸಮಿತಿ ಸದಸ್ಯರೂ, ಮಂಜನಾಡಿ ಗ್ರಾಮ ಪಂಚಾಯಿತಿ ಸದಸ್ಯರೂ ಆದ ನೌಷಾದ್ ಕಲ್ಕಟ್ಟ ಮಾತನಾಡಿ ಕೈರಂಗಳ ಭಾಗದಲ್ಲಿ ಒಂದು ಸಮಯದಲ್ಲಿ ಪಕ್ಷ ಕಟ್ಟುವುದೇ ದುಸ್ತರವೆನಿಸುವಂತಹ ಸ್ಥಿತಿ ಇತ್ತು. ಆದರೆ ಈಗ ಪಕ್ಷದ ಬಗ್ಗೆ ಈ ಭಾಗದ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಈ ಭಾಗದ ಕಾರ್ಯಕರ್ತರು ಯಶಸ್ವಿಯಾಗಿದ್ದು ಇದರ ಪ್ರತಿಫಲವೇ ಇಂದು ಈ ಭಾಗದಲ್ಲಿ ಪಕ್ಷ ಇಷ್ಟು ಬಲಿಷ್ಠವಾಗಿರುವುದಕ್ಕೆ ಕಾರಣ ಎಂದರು.
ಸಮಾರಂಭದಲ್ಲಿ ಕ್ಷೇತ್ರ ಸಮಿತಿ ಸದಸ್ಯರಾದ ಸಲಾಂ ವಿದ್ಯಾನಗರ, ಸಜಿಪ ಇರಾ ಬ್ಲಾಕ್ ಅಧ್ಯಕ್ಷರಾದ ನವಾಝ್ ಸಜಿಪ, ಗ್ರಾಮ ಪಂಚಾಯತ್ ಸದಸ್ಯರಾದ ಶಾಕಿರ್ ಮೊಂಟೆಪದವು, ಪಕ್ಷದ ಪ್ರಮುಖರಾದ ಇಬ್ರಾಹಿಂ ಮೊಂಟುಗೋಳಿ, ಗ್ರಾಮದ ಹಿರಿಯರಾದ ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು. ಆಸಿಫ್ ಪದಿಂಜಾರ್ ಕಾರ್ಯಕ್ರಮ ನಿರೂಪಿಸಿದರು.







