ಕೋಝಿಕ್ಕೋಡ್ | ಅಲಪ್ಪುಝದಲ್ಲಿ ಕೆಲವೇ ಗಂಟೆಗಳಲ್ಲಿ ನಡೆದ ಎರಡು ಕೊಲೆಗಳು ಅತ್ಯಂತ ಖಂಡನೀಯ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅಲ್ಲದೆ,ಈ ಅಪರಾಧ ಕೃತ್ಯಗಳನ್ನು ಎಸಗಿದ ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಅವರು ಒತ್ತಾಯಿಸಿದರು.
ಕೋಮುವಾದಿ ನಡೆಗಳು ಯಾರ ಕಡೆಯಿಂದಲೂ ಸ್ವೀಕಾರಾರ್ಹವಲ್ಲ. ಅವರು ಕತ್ತಿ ಮಸೆಯುವುದನ್ನು ನಿಲ್ಲಿಸಬೇಕು.ಇವರಿಗೆ ಜನರನ್ನು ಅನ್ಯಾಯವಾಗಿ ಕೊಲ್ಲುವ ಅಧಿಕಾರ ಕೊಟ್ಟವರು ಯಾರು? ಆ ಎರಡು ಕುಟುಂಬದ ಮಕ್ಕಳನ್ನು ಮತ್ತು ಅವರ ಆತ್ಮೀಯರನ್ನು ಯಾವ ರೀತಿಯಲ್ಲಿ ಸಮಾಧಾನ ಪಡಿಸುವರು? ಕೆಲವು ನಾಯಕರ ಅಪಕ್ವ ಪ್ರತಿಕ್ರಿಯೆಗಳು ಕೂಡ ತುಂಬಾ ನೋವುಂಟು ಮಾಡುತ್ತಿದೆ.
ಕೇರಳದಲ್ಲಿ ಈ ಅಪಾಯಕಾರಿ ಚಳುವಳಿಯನ್ನು ತಡೆಯಲು ಸರ್ಕಾರ ಮತ್ತು ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕು. ದೇಶದ ಶಾಂತಿ ಕದಡುವವರ ವಿರುದ್ಧ ಯಾವುದೇ ರಾಜಕೀಯ ಪಕ್ಷ ಭೇದವಿಲ್ಲದೆ, ಕ್ರಮ ಕೈಗೊಳ್ಳಬೇಕು. ಇಂತಹ ಅಪರಾಧಗಳ ವಿರುದ್ಧ ಕಾನೂನು ಪರಿಪಾಲಕರು ಸಂಪೂರ್ಣ ಜಾಗರೂಕರಾಗಿರಬೇಕು ಎಂದು ಕಾಂತಪುರಂ ಆಗ್ರಹಿಸಿದ್ದಾರೆ.


