ಬೆಳಗಾವಿ: ಮತಾಂತರ ನಿಷೇಧದಂತಹ ಕಾಯ್ದೆ ಜಾರಿಗೆ ತಂದು ದೇಶ ವಿಭಜನೆ ಮಾಡಲು ಹೊರಡಬೇಡಿ ಎಂದು ಮಾಜಿ ಸಚಿವ ಕೆ.ಜೆ ಜಾರ್ಜ್ ಹೇಳಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಅಂತ. ಆದ್ರೆ ಇಷ್ಟ ಬಂದಂತ ಧರ್ಮಕ್ಕೆ ಹೋಗಬಹುದು ಅಂತಿದೆ.ಬಲವಂತವಾಗಿ ಮತಾಂತರ ಆಗೋದಕ್ಕೆ ನಮ್ಮದು ವಿರೋಧವಿದೆ ಎಂದರು.
ಈ ಕಾನೂನು ತರುವ ಮೂಲಕ ಕೆಲವರಿಗೆ ನೈತಿಕ ಪೊಲೀಸ್ಗಿರಿಗೆ ಅವಕಾಶ ಮಾಡಿಕೊಟ್ಟಂತೆ ಆಗಲಿದೆ. ಹಿಂದು ಧರ್ಮವಾಗ್ಲಿ ಅಥಾವ ಬೇರೆ ಧರ್ಮವಾಗ್ಲಿ ಶಕ್ತಿಯುಕ್ತವಾಗಿದೆ. ಮೊಗಲರು, ಡಚ್ಚರು, ಪೋರ್ಚುಗೀಸರು ಬಂದರೂ, ಹಿಂದು ಧರ್ಮದ ಜನ ಸಂಖ್ಯೆ ಹೆಚ್ಚಿದೆ. ಕ್ರೈಸ್ತ ಸಮುದಾಯದ ಜನಸಂಖ್ಯೆ ಮೊದಲಗಿಂತ ಕಡಿಮೆ ಇದೆ. ರಾಜಕೀಯದ ದುರುದ್ದೇಶದಿಂದ ಈ ಕಾಯ್ದೆ ತರೋದಕ್ಕೆ ಹೊರಟಿದ್ದಾರೆ ಎಂದು ಆರೋಪಿಸಿದರು.
ಇಂಥ ಕಾಯ್ದೆ ತಂದು ದೇಶವಿಭಜನೆ ಮಾಡೋಕೆ ಹೊರಡಬೇಡಿ ಎಂದು ಸಿಎಂ ಹಾಗೂ ಅವರ ಪಕ್ಷದವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಕೆಜೆ ಜಾರ್ಜ್ ಹೇಳಿದರು.
ಮತಾಂತರ ನಿಷೇಧ ಕಾಯ್ದೆಯನ್ನು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಸರಕಾರ ಮಂಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಬಿಜೆಪಿಯ ಪ್ರಮುಖ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮಸೂದೆ ಮಂಡಿಸದಂತೆ ವಿರೋಧ ವ್ಯಕ್ತಪಡಿಸಿದೆ. ಇದರ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.







